Wednesday, December 19, 2007

ನಿಶ್ಚಲ ಮನಸ್ಸು - ಭಾಗ ಮೂರು.

ಇದು ನನ್ನ "ನಿಶ್ಚಲ ಮನಸ್ಸು" ಸರಣಿಯ ಮೂರನೇ ಮತ್ತು ಕೊನೆಯ ಕಂತು.

ಇಂತಹ ಕಷ್ಟಕರವಾದ ವಿಷಯದ ಬಗ್ಗೆ ಬರಿಯುವ ಮೊದಲು ನನ್ನನ್ನ ನಾನು ಅದರಲ್ಲಿ ಅಳವಡಿಸಿಕೊಳ್ಳೋದು ಬಹು ಮುಖ್ಯ ಅಂತ ಅನ್ನಿಸ್ತು. ಪರಿಣಾಮವಾಗಿ ಎಲ್ಲದರಲ್ಲೂ ದೃಢ ನಿರ್ಧಾರಗಳನ್ನ ತೆಗೆದುಕೊಳ್ಳೊದಕ್ಕೆ ಶುರು ಮಾಡಿದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನ ಯಾವುದೇ ಕಾರಣಕ್ಕೆ ಬದಲಾಯಿಸದೆ ಮುಂದುವರಿಯುವುದೇ ನಿಶ್ಚಲ ಮನಸ್ಸಿನ ಪ್ರತೀಕ ಅಂತ ಭಾವಿಸಿದೆ. ಈ ನಿಟ್ಟಿನಲ್ಲಿ ನಾನು ಮಾಡಿದ ಮೊದಲ ನಿರ್ಧಾರ ಅಂದ್ರೆ ಈ ವಿಷಯವನ್ನ ಎರಡೇ ಕಂತಿನಲ್ಲಿ ಬರೆದು ಮುಗಿಸಬೇಕು ಅಂತ.

ಮೊದಲ ಕಂತೇನೋ ಎರಡೇ ದಿವಸದಲ್ಲಿ ತಯ್ಯಾರ್. ಎರಡೂ ಕಂತುಗಳನ್ನ ಬರೆಯುವುದಕ್ಕೆ ಇಟ್ಟಿದ್ದ ೭ ದಿನಗಳಲ್ಲಿ ಇನ್ನೂ ೫ ದಿನ ಬಾಕಿ ಇತ್ತು. ನನ್ನ ದೃಢ ಮನಸ್ಸಿನ ಬಗ್ಗೆ ನನಗೇ ಹೆಮ್ಮೆ. ಆದ್ರೆ ಮುಂದೆ ಒಂದೂವರೆ ತಿಂಗಳಾದ್ರೂ ಎರಡನೇ ಕಂತು ಮುಗಿಸೊದಿರ್ಲಿ, ಶುರುಮಾಡ್ಲಿಕ್ಕೂ ಆಗ್ಲಿಲ್ಲ. ಆಗಿದ್ದಾಗಲಿ ಅಂತ ಒಂದ್ ಭಾನುವಾರ ಕುತ್ಕೊಂಡು ತಲೆಯಲ್ಲಿ ಇನ್ನೂ ಉಳಿದಿದ್ದೆಲ್ಲಾ ಬರ್ದು ಅಂತೂ ಇಂತೂ ಎರಡನೇ ಕಂತೂ ಮುಗಿಸಿದೆ.

ಅದ್ಯಾವ ಮೂಲೆಯಲ್ಲಿ ಬಿದ್ದಿತ್ತೊ ಏನೋ ಕಷ್ಟ ಪಟ್ಟು ಮೊದಲನೆಯದನ್ನು ಹುಡುಕಿ, ಧೂಳು ಕೊಡವಿ ಎರಡೂ ಕಂತುಗಳನ್ನ ಒಂದರ ಬೆನ್ನಹಿಂದೆ ಇನ್ನೊಂದರ ಹಾಗೆ ಓದಿದೆ. ಅವಾಗಲೇ ಶುರು ಆಗಿದ್ದು, ಪೀಕಲಾಟ. ಎರಡೂ ಕಂತುಗಳು ಒಂದಕ್ಕೊಂದು ಸಂಬಂಧನೇ ಇಲ್ಲ ಅನ್ನೋ ಹಾಗಿದ್ವು. ಒಂದು 'ಕಾ ಕಾ' ಅಂದ್ರೆ ಇನ್ನೊಂದು 'ಬೌ ಬೌ' ಅಂತಿತ್ತು. ಬರೇ, ಬರೇ ಒಂದೂವರೆ ತಿಂಗಳಲ್ಲಿ ಕೆಲವೊಂದು ವಿಷಯಗಳಲ್ಲಿ ನನಗೆ ಇದ್ದ ಅಭಿಪ್ರಾಯ, ಭಾವನೆಗಳೆಲ್ಲಾ ಸಂಪೂರ್ಣ ವಿಭಿನ್ನವಾಗಿದ್ವು. ಮೊದಲನೇ ಕಂತಿನಲ್ಲಿದ್ದ ಕೆಲವು ಸಾಲುಗಳಿಗೆ ಎರಡನೇ ಕಂತಿನ ಕೆಲವು ಸಾಲುಗಳು ತದ್ವಿರುದ್ಧ, ಅಜನ್ಮ ವೈರಿಗಳ ಹಾಗೆ ಇದ್ವು.

ಆದಕ್ಕೆ ಅದೆರಡನ್ನು ಯಾರಿಗೂ ತೋರಿಸ್ದೆ ನಮ್ಮನೆ ಕಸದಬುಟ್ಟಿಯಲ್ಲಿ ಬಚ್ಚಿಟ್ಟಿದಿನಿ. ಶ್! ಯಾರಿಗೂ ಹೇಳಬೇಡಿ. ಮರೆತು ಇದೇ ವಿಷಯದ ಬಗ್ಗೆ ಮತ್ತೆ ಮತ್ತೆ ಬರಿತಾ ಕೂಡಬಾರದು ಅಂತ ಈ ಕೊನೇ ಕಂತನ್ನ ಇಲ್ಲಿ ಹಾಕ್ತಿರೋದು. ಅಷ್ಟೇ.

Monday, October 29, 2007

ಹುಡುಕಾಟ...

"ಏನದು ಹಂಗಂದ್ರೆ? ಹೊಸ ವಾಶಿಂಗ್ ಪೌಡರ್ರಾ?"

ನಂಗೆ ಸಿಟ್ಟು ಬಂತು. 'ಏನ್ರಿ, ನಿಮಗ ಕನ್ನಡ ಬರಲ್ಲೇನು? ಅಷ್ಟು ಸ್ಪಷ್ಟವಾಗಿ ಹೇಳ್ತಿದಿನಿ, ಮತ್ತೆ ಏನು ವಾಶಿಂಗ್ ಪೌಡರ್ರಾ ಅಂತ ಕೇಳ್ತಿದಿರಲ್ಲಾ?'

"ರೀ ಸ್ವಾಮಿ, ನಾನೂ ಇಲ್ಲೇ ಹುಟ್ಟಿ ಬೆಳ್ದಿದ್ದು. ನನಗೆ ನಿಮಗಿಂತ ಚೆನ್ನಾಗೇ ಬರುತ್ತೆ, ಕನ್ನಡ. ಆದ್ರೆ ಅದೇನೋ ಕೇಳ್ತಿದಿರಲ್ಲಾ ಅಂತ ಸಾಮಾನು ನಮ್ಮಂಗಡಿಯಲ್ಲಿಲ್ಲ. ಬೇರೆ ಕಡೆ ವಿಚಾರಿಸಿ. ಬೆಳ್ ಬೆಳಿಗ್ಗೆ ಟೈಮ್ ವೇಸ್ಟ್ ಮಾಡ್ಬೇಡಿ. ಹೂ ಏನಮ್ಮಾ ನಿಂಗೆ? ಪೇಪರ್ ಅವಲಕ್ಕಿ ಬೇಕಾ ಅಥವಾ ದಪ್ಪನ ಅವಲಕ್ಕಿ ಬೇಕಾ....."

ಸಿಕ್ಕಿದೇನಾದ್ರು ತೊಗೊಂಡು ಅವನ ತಲೆ ಒಡೆಯೋಣ ಅನ್ನಿಸ್ತು. ಅಕ್ಕ ಪಕ್ಕ ಜನ ನೋಡಿ ಸುಮ್ನೆ ಬಂದೆ. ಬೆಳಿಗ್ಗೆ ಇಂದ ಅದು ನಾಲ್ಕನೇ ಅಂಗಡಿ ಆಗಿತ್ತು. ಒಬ್ಬವನ ಹತ್ರನೂ ಇಲ್ಲ ಅಂದ್ರೆ ಎನ್ ಕತೆ? ಅಂಗಡಿ ಇಟ್ಟ ಮೇಲೆ ಎಲ್ಲಾ ಸಾಮಾನು ಇಟ್ಟಿರಬೇಕು. ಸುಮ್ನೆ ಯಾಕ್ ಬೇಕು ಅದು, ತೆಪ್ಪಗೆ ಹಾಸ್ಟೆಲ್ ಗೆ ಹೋಗಿ ಬಿದ್ರೆ ಆಯಿತು ಅಂತ ವಾಪಾಸ್ ಬಂದೆ.

ಅದಿಲ್ಲದಿದ್ದರೂ ನಡಿಯುತ್ತೆ ಅಂತ ಮೂರು ದಿನ ಅನ್ನಿಸಿದ್ರೂ, ಉಳಿದ ನಾಲ್ಕು ದಿನ ಅದಿಲ್ಲದಿದ್ದರೆ ಏನಾಗುತ್ತೆ ಅನ್ನೋದು ಅರ್ಥ ಆಗ್ತಿತ್ತು. ಸರಿ, ಎರಡು ವಾರ ಆದಮೇಲೆ ಮತ್ತೆ ಹುಡ್ಕೊಕ್ಕೆ ಹೊರಟೆ. ಸರಿಯಾಗಿ ಎಲ್ಲಿ, ಯಾವ ಅಂಗಡಿಯಲ್ಲಿ ಸಿಗುತ್ತೆ ಅಂತನೂ ಗೊತ್ತಿಲ್ಲ. ಮೂರ್ನಾಲ್ಕು ಕಡೆ ಕೇಳಿ, ೧೦-೧೦ ನಿಮಿಷ ಬೈದಿದ್ದು, ಬೈಸಿಕೊಂಡಿದ್ದೂ ಆಯ್ತು. ತಲೆ ಕೆಟ್ಟು, ಮಸಾಲ ಚಾಯ್ ಅಂಗಡಿಗೆ ಬಂದು ಕುತ್ಕೊಂಡೆ.

ಚಾ ಕಪ್ಪಿಗೆ ಚಹಾನ ಎತ್ತಿ ಸುರಿತಾ, ಅಂಗಡಿಯವನು ಕೇಳ್ದ "ಏನ್ ಸರ್, ತುಂಬಾ ಟೆನ್ಷನ್ ಅಲ್ಲಿ ಇದಿರಾ? ಏನಾಯ್ತು?"

ಹಿಂಗಿಂಗೆ ಅಂತ ಹೇಳ್ದೆ.

ಜೋರಾಗಿ ನಕ್ಕ್ ಬಿಟ್ಟ. "ಇಷ್ಟೆನಾ? ನನ್ನ ಕೇಳಿದ್ರೆ ಕೊಡ್ತಿದ್ದೆ." ಅಂದ.

'ಯೊ.. ಹೊಗಯ್ಯ, ನನ್ನ ಕಷ್ಟ ನಂಗಾದ್ರೆ, ಮ್ಯಾಲೆ ನಿಂದ್ ಬೇರೆ. ಎಂತೆಂತಾ ದೊಡ್ಡ ಅಂಗಡಿಗಳಲ್ಲಿ ಕೇಳಿದಿನಿ, ಅಲ್ಲಿಲ್ದಿದ್ದು ನಿನ್ನ ಹತ್ರ ಹೆಂಗ್ ಬರ್ಬೇಕು? ನಿಮ್ಮ ಚಾಯ್ ಅಂಗಡಿಯವರ್ದು ಗೊತ್ತಿಲ್ಲೇನ್ ನಂಗೆ, ಇಂತದ್ದು ಗೊತ್ತಿಲ್ಲ ಅಂತ ತೋರಿಸ್ಕಳಲ್ಲ. ದೇವ್ರು ಎಲ್ಲಿ ಅಂದ್ರೆ, ಓಹ್ ಮೊನ್ನೆ ಮಾರ್ಕೆಟ್ ಅಲ್ಲಿ ಸಿಕ್ಕಿದ್ದ ಅನ್ನೋ ಜಾತಿ ನಿಮ್ದು'

ಅವನ ಮುಖದಲ್ಲಿ ಆ ನಗು ಇನ್ನೂ ಹಂಗೇ ಇತ್ತು. "ಸರ್, ನೀವು ಕೇಳಿದ್ದು, ನನ್ನ ಹತ್ರ ಇದೆ ಅಂತ ಹೇಳ್ತಿನಿ ಅಷ್ಟೆ. ನಂಬೋದು ಬಿಡೋದು ನಿಮಗ್ ಬಿಟ್ಟಿದ್ದು. ಆದ್ರೆ ನಾನೂ ಸ್ವಲ್ಪ ಜವಾರಿನೇ. ಅಷ್ಟು ಸುಲಭ ಆಗಿ ನಿಮ್ಗೆ ಕೊಟ್ಬಿಡಲ್ಲ. ನಾನು ಹೇಳೊ ಕೆಲ್ಸ ಮಾಡಿದ್ರೆ ಅಷ್ಟೆ ಕೊಡೊದು." ಅಂತ ಹೇಳಿ ಕಪ್ಪು ಇಟ್ಟು ಹೋದ.

ಅವನ ಮಾತು ಕೇಳಿ ಸಿಟ್ಟು ನೆತ್ತಿಗೇರಿತು. ಒಂದು ಗುಟುಕು ಕುಡಿದವನೇ ಕಪ್ಪನ್ನ ಜೋರಾಗಿ ಟೇಬಲ್ಲಿಗೆ ಕುಕ್ಕಿ 'ಖಚಡಾ ಟೀ' ಅಂತ ಉಗುದು ಬಂದೆ, ದುಡ್ಡೂ ಕೊಡ್ದೆ. ಅವನ ಮುಖದಲ್ಲಿ ನಗು ಹಂಗೇ ಇತ್ತು.

ಸಾಯಂಕಾಲ, ರಾತ್ರಿ ಎಲ್ಲಾ ಯೋಚನೆ ಮಾಡಿದಾಗ ಯಾಕೋ ಅವನ ಹತ್ರ ಇದೆ ಅಂತ ಅನ್ನಿಸ್ತಿತ್ತು. ಕೊನೆ ಪಕ್ಷ ಅವನ ಹತ್ರ ಇಸ್ಕೊಳ್ಳೊ ತನಕ ಸಿಟ್ಟು ಹಿಡಿತದಲ್ಲಿಟ್ಟುಕೊಳ್ಳಬೇಕು ಅನ್ಕೊಂಡು ಮರುದಿವ್ಸ ಮತ್ತೆ ಹೋದೆ.

'ಸರಿ ಎನ್ ಮಾಡ್ಬೇಕು ಹೇಳು. ಸುಮ್ನೆ ಎಲ್ಲಾ ಆದ್ಮೇಲೆ ತಮಾಷೆಗೆ ಮಾಡಿದ್ದು ಅಂತ ಎನಾದ್ರೂ ರಾಗ ಎಳೆದ್ರೆ ಕೊಂದೇ ಬಿಡ್ತಿನಿ ಅಷ್ಟೆ..'

ನಗು ಅವನ ಮುಖ ಬಿಟ್ಟು ಹೋಗಿರ್ಲಿಲ್ಲ. ಅಲ್ಲಿ ಇಲ್ಲಿ ಹುಡಿಕ್ಯಾಡಿ ಒಂದು ದೊಡ್ಡ ಲಿಸ್ಟ್ ತೆಗೆದು ಕೊಟ್ಟ. ಅದ್ರಲ್ಲಿ ಒಂದ್ ಇನ್ನೂರು ಮುನ್ನೂರು ಹೆಸರಿದ್ವು. ಎಲ್ಲಾ ಬೇರೆ ಬೇರೆ ತರಹದ ಅಂಗಡಿಗಳದ್ವು. ಬೀಡಾ ಅಂಗಡಿ, ಸೈಕಲ್ ಅಂಗಡಿ, ಚಪ್ಪಲಿ ಹೊಲೆಯೊ ಅಂಗಡಿ, ಕಿರಾಣಿ ಅಂಗಡಿ, ಸ್ಟೇಷನರಿ ಅಂಗಡಿ, ಜವಳಿ ಅಂಗಡಿ, ಹೋಟೆಲ್, ಕಂಪ್ಯೂಟರ್ ಅಂಗಡಿ, ಹಿಂಗೆ ಎಂತೆಂತವೋ. ತಲೆ ಬುಡ ಅರ್ಥ ಆಗ್ಲಿಲ್ಲ. ಅವ್ನನ್ನ ಒಂದ್ ಸರ್ತಿ ಕಣ್ಕಣ್ ಬಿಟ್ಟು ನೋಡ್ದೆ. ಮಸಾಲ ಟೀ ಮುಂದೆ ಇಡ್ತ ಅವ್ನು ಹೇಳ್ದ,

"ನೋಡಿ ಸರ್, ೨೫ ವರ್ಷದಿಂದ ಇಲ್ಲೇ ಚಾ ಅಂಗಡಿ ಹಾಕ್ಕೊಂಡ್ ಇದಿನಿ. ಚಾ ಅಂಗಡಿ ಅಂದಮೇಲೆ ನೂರೆಂಟು ತರಹದ ಜನ ಪರಿಚಯ ಆಗ್ತಾರೆ. ಆ ಪೇಪರ್ ಕೊಟ್ಟ್ನಲ್ಲಾ, ಅದೆಲ್ಲಾ ನನ್ನ ಪರಿಚಯದವರ ಅಂಗಡಿಗಳು. ಅಲ್ಲೆಲ್ಲಾ ಹೋಗಿ ನನ್ನ ಹೆಸರು ಹೇಳಿದ್ರೆ ಖಂಡಿತ ಗುರ್ತು ಹಿಡಿತಾರೆ. ನೀವು ಮಾಡ್ಬೇಕಾಗಿರೋದು ಇಷ್ಟೆ. ದಿನಾ ಒಂದಿಷ್ಟು ಅಂಗಡಿಗಳ ಹತ್ರ ಹೋಗಿ, ಎರಡು ಹದ್ದಿನ ಮರಿ ಬೇಕು ಅಂತ ಕೇಳಿ. ಪ್ರತಿಯೊಬ್ರು ಇಲ್ಲ ಅಂತನೇ ಹೇಳ್ತಾರೆ. ಇನ್ನೊಂದು ಸರ್ತಿ ಕೇಳಿ. ಬಾಯಿತುಂಬ ಬಯ್ಯಬಹುದು. ಮತ್ತೆ ಕೇಳಿ, ಮುಖ ಒರಿಸಿಕೊಳ್ಳೊ ಹಂಗೆ ಉಗಿಬಹುದು. ಮತ್ತೆ ಇನ್ನೊಂದ್ ಸರ್ತಿ ಕೇಳಿ, ಹೊಡಿಲಕ್ಕೂ ಬರ್ಬಹುದು. ಆಮೇಲೆ ಮತ್ತೊಂದ್ ಸರ್ತಿ ಕೇಳಿ, ಮುಂದಿನ ಅಂಗಡಿಗೆ ಹೋಗಿ!"

"ಹಿಂಗೆ ಪ್ರತಿಯೊಂದು ಅಂಗಡಿಯಲ್ಲೂ ಮಾಡ್ತಾ ಹೋಗಿ. ಆ ಪಟ್ಟಿಯಲ್ಲಿರೊದೆಲ್ಲಾ ಮುಗಿಯೊಕ್ಕೆ ಒಂದ್ ವಾರ ಹಿಡಿಬಹುದು. ಆಮೆಲೆ ನನ್ನ ಹತ್ರ ಬರ್ರಿ, ನೀವು ಕೇಳಿದ್ದು ಖಂಡಿತ ಕೊಡ್ತಿನಿ!". ಮುಖದ ಮೇಲೆ ಇನ್ನೂ ಅದೇ ನಗು.

ಪಕ್ಕಾ ಈ ಮನುಷ್ಯಂಗೆ ಹುಚ್ಚು ಹಿಡ್ದದ ಅಂತ ಅನ್ನಿಸ್ತು. ಆದ್ರೆ ನಾನು ಹುಡುಕ್ತಿದ್ದ ವಸ್ತು ಬಹಳ ಶ್ರೇಷ್ಠವಾದ್ದರಿಂದ, ಮೊದಲು ಹುಡುಕಿದ ಕಡೆ ಎಲ್ಲೂ ಸಿಗದಿದ್ರಿಂದ, ಹೂ ಅಂತ ಒಪ್ಕೊಂಡೆ.

"ಸರ್, ಇನ್ನೊಂದು ವಿಷಯ. ಇದೆಲ್ಲಾ ನೀವು ಬೇಕಂದ್ರೆ ಮಾಡಬಹುದು, ಒತ್ತಾಯ ಎನೂ ಇಲ್ಲ. ಆದ್ರೆ ನೀವು ಯಾವುದೇ ಅಂಗಡಿಯವನಿಗೆ ಬಯ್ಯಬಾರ್ದು, ಹೊಡಿಬಾರ್ದು, ಅವರ ಜೊತೆ ಜಗಳ ಮಾಡಬಾರ್ದು, ಎಲ್ಲೂ ನನ್ನ ಹೆಸರು ಎತ್ತಬಾರ್ದು. ಸುಮ್ನೆ ನಾನು ನಿಮಗೆ ಹೇಳಿದ್ನಲ್ಲಾ, ಅಷ್ಟೆ ಮಾಡ್ಬೆಕು. ನೀವು ಇಂತದೇನಾದ್ರೂ ಮಾಡಿದ್ರೆ ನನಗೆ ಗೊತ್ತಾಗೇ ಆಗುತ್ತೆ, ಅವ್ರಿಲ್ಲಿಗೆ ಬಂದಾಗ. ಆಮೇಲೆ ನಿಮ್ಮ ವಸ್ತು ಸಿಗೋದು ಸ್ವಲ್ಪ ಕಷ್ಟ ಆಗ್ಬಹುದು. ಮುಂದಿನ ವಾರ ಬನ್ನಿ ನೋಡೋಣ."

ನಾಳೆ ನೆನಸ್ಕೊಂಡ್ರೇನೆ ಭಯ. ಯಾವನೋ ಸೈಕಲ್ ರಿಪೇರಿ ಶಾಪ್ ಅವನ ಹತ್ರ ಹೋಗಿ ಎರಡು ಹದ್ದಿನ ಮರಿ ಕೊಡಿ ಅಂದ್ರೆ, ಏನನ್ನಬಹುದು ಅವ್ನು? ಅದೂ ಐದ್ ಐದು ಸರ್ತಿ ಕೇಳಿದ್ರೆ!! ರಾತ್ರಿಯೆಲ್ಲಾ ನಿದ್ದೆ ಇಲ್ಲ. ಆದ್ರೂ ಬೆಳಿಗ್ಗೆ ಆಯ್ತು.

ಸಾಯಂಕಾಲ ಚಾ ಕುಡಿತಾ ಅವ್ನ ಹತ್ರ ಎಲ್ಲಾ ಹೇಳಿದೆ. ಪ್ರತಿಯೊಬ್ಬರ ಹತ್ರನೂ ಬಾಯಿಗೆ ಬಂದಹಾಗೆ ಬಯ್ಯಿಸಿಕೊಂಡಿದ್ದು, ಇಸ್ತ್ರಿ ಅಂಗಡಿ ಮತ್ತೆ ತರಕಾರಿ ಮಾರೊವನ ಹತ್ರ ಹೊಡದಾಡಿದ್ದು, ಎಲ್ಲಾ. ಸಣ್ಣಗೆ ನಕ್ಕು ಹೇಳ್ದ, "ಸಾರ್, ನಾನು ಹೇಳಿದ್ದಂಗೆ ನೀವು ಮಾಡ್ತಿಲ್ಲ. ನೀವು ಅಲ್ಲಿ ಹೋಗಿ ಕೇಳೊ ಹದ್ದಿನ ಮರಿ ಅವ್ರ ಹತ್ರ ಇರೊಲ್ಲ ಅಂತ ನಿಮಗೂ ಗೊತ್ತು. ಹಂಗೆ ಅವ್ರು ಬೈತಾರೆ ಅಂತಾನೂ ಗೊತ್ತು. ನಿಮಗೆ ಅಲ್ಲಿ ಹೋಗಿ ಕೇಳೊದಲ್ದೆ ಬೇರೆ ದಾರಿನೇ ಇಲ್ಲ ಅಂತಾನೂ ಗೊತ್ತು. ಇಷ್ಟೆಲ್ಲಾ ಗೊತ್ತಿದ್ದಮೇಲೆ ಅವರಜೊತೆ ಸಿಟ್ಟು ಮಾಡ್ಕೊಂಡು ಎನು ಪ್ರಯೋಜನ?"

ಅವನು ಹೇಳಿದ್ದೂ ಸಿಜ ಅನ್ನಿಸ್ತು. ಮರುದಿವ್ಸದಿಂದ ಅಂಗಡಿಯವ್ರು ಬೈಯ್ಯಬೇಕಾದ್ರೆ, ಗಟ್ಟಿಯಾಗಿ ಸಿಟ್ಟು ತಡೆ ಹಿಡ್ಕೊಂದು ಒಂದು, ಎರಡು, ಮೂರು ಎಣಿಸೊದೊ ಅಥವಾ ಎನೊ ಒಂದು ಮಾಡ್ತಿದ್ದೆ. ಇನ್ನೊಂದೆರಡು ದಿವ್ಸದಲ್ಲಿ ಸಿಟ್ಟು ಬರೋದೇ ಕಡಿಮೆಯಾಗ್ತಾ ಬಂತು. ಯಾವನು ಹೆಂಗೇ ಬೈದರೂ ಸುಮ್ನೆ ನಗುಮುಖ ಹಾಕ್ಕೊಂಡು ನಿಂತು ಬಿಡ್ತಿದ್ದೆ. ಅಂದುಕೊಂಡಿದ್ದಕ್ಕಿಂತ ಒಂದು ದಿವ್ಸ ಮೊದ್ಲೆ ಲಿಸ್ಟ್ ಅಲ್ಲಿದ್ದ ಎಲ್ಲಾ ಅಂಗಡಿಗಳೂ ಮುಗಿದ್ಹೊದ್ವು. ಅವತ್ತೇ ಹೋಗಿ ಚಾ ಅಂಗಡಿಯವ್ನಿಗೆ ಹೇಳಿದೆ.

ಅವ್ನು ನಗನಗತಾ "ಸರಿ ಸರ್, ಬಹಳ ಸುಧಾರಿಸಿದಿರಾ ಅಂತ ಕೇಳಿದೆ. ಇವತ್ತು ನಾನು ನೀವು ಕೇಳಿದ ಸಾಮಾನನ್ನ ಕೊಡ್ತಿನಿ. ಆದ್ರೆ ನನ್ನ ಹತ್ರನೂ ಬಹಳ ಇಲ್ಲ. ಅಲ್ಪ ಸ್ವಲ್ಪ ಅಲ್ಲಿ ಇಲ್ಲಿ ಸಿಕ್ಕಿದ್ದು ಅಷ್ಟೆ." ಅಂತ ಹೇಳಿ ಅವನ ದುಡ್ಡಿನ ಡ್ರಾವರ್, ಕಪಾಟು ಅಲ್ಲಿ ಇಲ್ಲಿ ಹುಡಿಕಿ ಒಂದು ಸಣ್ಣ ಪ್ಲಾಸ್ಟಿಕ್ ಬ್ಯಾಗ್ ತೆಗೆದ. ಅದನ್ನ 'ಉಫ್' ಅಂತ ಊದಿ ಒಂದು ಗಂಟು ಹಾಕಿ ನನ್ನ ಕೈಗೆ ಕೊಟ್ಟ.

ನಾನೂ ಜೋರಾಗಿ ನಕ್ಕೆ. 'ತುಂಬಾ ಥ್ಯಾಂಕ್ಸ್ ರೀ, ಇಷ್ಟು ಸಾಕ್ ಬಿಡ್ರಿ ನಂಗೆ. ಇದ್ರಿಂದ ಎಷ್ಟು ಬೇಕೋ ಅಷ್ಟು ನಾನೇ ಬೆಳಿಸ್ಕೋತಿನಿ' ಅಂತ ಹೇಳಿ ಹಾಸ್ಟೆಲ್ ಗೆ ಬಂದೆ, ಆ ಪ್ಲಾಸ್ಟಿಕ್ ಬ್ಯಾಗನ್ನ ಕಸದಬುಟ್ಟಿಗೆ ಹಾಕ್ತಾ.

Tuesday, September 25, 2007

ಹಸಿರು...

ಕೀ.. ಕೀ.. ಕೀ...

ಎರಡು ವರ್ಷ ಹಳೇ ಸೈಕಲ್, ಒಂದೊಂದು ಸಾರಿ ಪೆಡಲ್ ತುಳಿದಾಗೆಲ್ಲಾ ಮತ್ತೆ ಅದೇ ರಾಗ ಎಳಿತಿತ್ತು. ಗುರ್ತು, ಪರಿಚಯ ಇಲ್ಲದೊರು ಎನಾದ್ರು ನೋಡಿದ್ರೆ, ನಾನು ಅದಕ್ಕೆ ಒದಿತಿದಿನೆನೊ, ಅದಕ್ಕೆ ಅದು ಕಿರಿಚಿಕೊಳ್ತಿದೆ ಏನೋ, ಅಂತ ಅನ್ಕೊಬೇಕು ಅಂತಹ ಶಬ್ದ. ಬಲ್ಲಾಳ್ ಸರ್ಕಲ್ ದಾಟಿ, ಕೋರ್ಟ್ ರೋಡ್ ಹಿಡಿದು ವಿಜಯನಗರದ ಕಡೆ ಹೊರಟಿದ್ದೆ, ಬೆಳ್ಳಂಬೆಳಿಗ್ಗೆ ೧೦ ಘಂಟೆಗೆನೇ, ಸಂಬಂಧಿಕರ ಮನೆಗೆ, ಹಾಗೇ ಮಾತಾಡಿಸಿಕೊಂಡು ಒಂದು ರೌಂಡ್ ತಿಂಡಿನೂ ಮುಗಿಸೋಕೆ. ಅಷ್ಟು ಹೊತ್ತು ಸೈಕಲ್ ತುಳಿದಿದ್ದರಿಂದ ಸುಸ್ತಾಗಿ, ಆರಾಮವಾಗಿ ತುಳಿತಿದ್ದೆ, ಅದೇ ಕೀಕೀ ರಾಗ ಕೇಳ್ತ. ಅಂತಹಾ ಮೋಡ ಕವಿದ ವಾತಾವರಣ, ರೋಡಿನ ಟಾರಲ್ಲಿ ಬಿಟ್ಟು ಉಳಿದೆಲ್ಲಾ ಕಡೆ ಹಬ್ಬಿರುವ ಹಸಿರು, ೧೦ ತರದ ಹಕ್ಕಿಗಳ ದ್ವನಿಯ ಇಂಪು, ಎಲ್ಲಾ ಸೇರಿ ಎಂತವರನ್ನೂ ಪ್ರಕೃತಿಗೆ ತಲೆಬಾಗುವ ಹಾಗೆ ಮಾಡಿತ್ತು. ಇದನ್ನೆಲ್ಲಾ ಮನಃಪೂರ್ತಿ ಸವಿಯುತ್ತಾ ಸಾಗಿತ್ತು, ನನ್ನ ಸೈಕಲ್ ಸವಾರಿ.

ಅಷ್ಟರಲ್ಲಿ ವ್ಯಾಗನ್-ಆರ್ ಅಲ್ಲಿ ಅದೆಲ್ಲಿಂದ ಅದೆಲ್ಲಿಗೆ ಹೋಗ್ತಿದ್ದನೋ ಎನೋ, ೭೦ ರ ವೇಗದಲ್ಲಿ ಬಂದವ ರಸ್ತೆ ತಿರುವಿನ ಹತ್ತಿರ ನನ್ನ ಸೈಕಲ್ ಗೆ ಗುದ್ದಿದ. ಆ ಹೊಡೆತಕ್ಕೆ ಹಾರಿದವನೇ ಸೀದ ಹೋಗಿ ಫುಟ್ಪಾತಿನ ಅಂಚಿಗೆ ಮುಖ ಹೊಡೆದುಕೊಂಡು ಬಿದ್ದೆ. ಇದೆಲ್ಲಾ ನನಗೆ ಗೊತ್ತೇ ಆಗಿರಲಿಲ್ಲ. ಆಸ್ಪತ್ರೆಯ ಬೆಡ್ ಮೇಲೆ ಬಿದ್ಕೊಂಡಾಗ ಡಾಕ್ಟರ್ ಹೇಳಿದ ಮೇಲೆ ಗೊತ್ತಾಗಿದ್ದು. ಅಷ್ಟೇ ಅಲ್ಲದೆ ಅವರು ಉಳಿದದ್ದೆಲ್ಲಾ ಹೇಳಿದ್ರು. ಎಷ್ಟೋ ದಿವಸ ಕೋಮದಲ್ಲಿದ್ದಿದ್ದು, ಮುಖ ಕೊಟ್ಟು ಬಿದ್ದಿದ್ದರಿಂದ ನನ್ನ ಕಣ್ಣುಗಳನ್ನ ತೆಗೆಯಬೇಕಾಗಿ ಬಂದದ್ದು, ನನ್ನ ದೊಡ್ಡ ಪುಣ್ಯದಿಂದಾಗಿ ನೇತ್ರದಾನಿಗಳೊಬ್ಬರು ಅದೇ ಸಮಯದಲ್ಲಿ ತೀರಿಕೊಂಡಿದ್ದು, ಅವರ ಕಣ್ಣುಗಳನ್ನ ನನಗೆ ಜೋಡಿಸಿದ್ದು, ಎಲ್ಲಾ. ಕಣ್ಣಿಗೆ ಸುತ್ತಿದ್ದ ಬಟ್ಟೆಯನ್ನಿನ್ನೂ ಬಿಚ್ಚಿರಲಿಲ್ಲ. ಅಂತಹ ಸುಂದರ ಮುಂಜಾನೆ ಹೋಗಿ ಎನೆಲ್ಲಾ ಅಯಿತಲ್ಲಾ ಅಂತ ಮನಸ್ಸು ತುಂಬಾ ಭಾರವಾಯ್ತು. ಸ್ವಲ್ಪ ದಿನ ಆದಮೇಲೆ ಕಟ್ಟು ಬಿಚ್ಚಿದರು. ಮೊದಲಿನಂತೆಯೇ ಕಾಣುತಿದ್ದರಿಂದ ದೊಡ್ಡ ಅನಾಹುತದಿಂದ ಪಾರಾದ ಸಮಾಧಾನ ಆ ಹೊಸ ಕಣ್ಣುಗಳಲ್ಲಿ ಮಿಂಚುತಿತ್ತು. ಇನ್ನೂ ಸ್ವಲ್ಪ ದಿನ ಅಲ್ಲೇ ಇರಬೇಕಂದಿದ್ದರಿಂದ ಆರಾಮವಾಗಿ ಮಂಚಕ್ಕೊರಗಿದೆ.

ಮಾಡಲಿಕ್ಕೆ ಬೇರೆನೂ ಕೆಲ್ಸ ಇಲ್ದೆ, ಆ ಹೊಸ ಕಣ್ಣುಗಳನ್ನ ಟೆಸ್ಟ್ ಮಾಡುವವರ ಹಾಗೆ ಆ ದೊಡ್ಡ ರೂಮಿನಲ್ಲಿ ಆಕಡೆ ಈಕಡೆ ನೋಡ್ತಾ ಕುತ್ಕೊಂಡೆ. ಆಶ್ಚರ್ಯ ಆಯ್ತು! ಇನ್ನೊಂದು ಸರ್ತಿ ಹಾಗೆ ಅದನ್ನ ನೋಡಿದೆ, ಉಹೂ ಬದಲಾಗಲಿಲ್ಲ. ಆ ರೂಮಿನ ಒಂದು ಮೂಲೆಯಲ್ಲಿ ಸಣ್ಣ ಹೂವಿನ ಗಿಡದ ಕುಂಡ ಇಟ್ಟಿದ್ರು. ಕೆಂಪು ಹಳದಿ ಹೂವು, ಆದರೆ ಅದರ ಎಲೆಗಳೆಲ್ಲಾ ನೀಲಿ ಬಣ್ಣ! ಆಶ್ಚರ್ಯ ಆಯ್ತು. ಜೀವನದಲ್ಲಿ ಮೊದಲಬಾರಿಗೆ ನೀಲಿ ಬಣ್ಣದ ಎಲೆಗಳನ್ನ ನೋಡಿದ್ದು. ಹಾಗೆ ಕಣ್ಣು ಇನ್ನೊಂದು ಮೂಲೆ ಕಡೆ ತಿರುಗಿತು. ನೋಡಿದ್ರೆ ಅಲ್ಲೂ ಅಂತದೇ ಇನ್ನೊಂದು ಗಿಡ. ಸರಿಯಾಗಿ ನೋಡಿದಾಗ ಗೊತ್ತಾಯಿತು, ಅದರ ಹೂಗಳ ಬಣ್ಣ ಬಿಳಿಯಾಗಿದ್ದು, ಅದರ ಪಕಳೆಗಳು ಮೊದಲ ಗಿಡದ ಹಾಗಿರದೆ ಉದ್ದುದ್ದವಾಗಿದ್ವು. ಆದರೆ ಎಲೆಗಳು ಮಾತ್ರ ಅದೇ ನೀಲಿ ಬಣ್ಣ! ಎರಡು ಸರ್ತಿ ಕಣ್ಣುಜ್ಜಿಕೊಂಡು ನೋಡಿದ್ರೂ ಬದಲಾಗ್ತಿಲ್ಲ. ಇಂಜೆಕ್ಷನ್ ಕೊಡ್ಲಿಕ್ಕೆ ಬಂದ ನರ್ಸ್ ಅನ್ನ ಕುತೂಹಲದಿಂದ ಕೇಳಿದೆ, 'ಎಲ್ಲಿಂದ ತಂದ್ರಿ ಈ ನೀಲಿ ಎಲೆಗಳ ಗಿಡಗಳನ್ನ..?'. ಆ ಗಿಡಗಳನ್ನೊಮ್ಮೆ ನೋಡಿ, ನನ್ನನ್ನು ದುರುಗುಟ್ಟಿ ನೋಡಿ ಎನೂ ಮಾತಾಡ್ದೆ ಸ್ವಲ್ಪ ಜೋರಾಗಿಯೇ ಇಂಜೆಕ್ಷನ್ ಚುಚ್ಚಿ ಹೋದ್ಲು. ಮೆಲ್ಲಕ್ಕೆ ನಂಗೆ ಅನುಮಾನ ಬರೊಕ್ಕೆ ಶುರು ಆಯಿತು. ಹಾಗೆ ಎದ್ದವನೇ ಕಿಡಿಕಿ ಹತ್ರ ಹೋದೆ. ಮೂರ್ಛೆ ತಪ್ಪೊದೊಂದು ಬಾಕಿ. ಕೆಳಗಡೆ ಮಾಲಿ, ನೀಲಿ ಎಲೆಗಳ ಗಿಡಕ್ಕೆ ನೀರು ಬಿಡ್ತಿದ್ದ. ರೋಗಿಗಳೆಲ್ಲಾ ಅಲ್ಲೇ ಹುಲ್ಲಿನ ಮೇಲೆ ಕೂತಿದ್ರು. ಹುಲ್ಲೆಲ್ಲಾ ನೀಲಿ ನೀಲಿ. ನೀರಿನ ಪೈಪ್ ಹಿಡಿದು ಮೇಲೆ ಹಬ್ಬುತ್ತಿದ್ದ ಬಳ್ಳಿ ಕೂಡ ನೀಲಿ. ಯಾವದೊ ಬೇರೆ ಪ್ರಪಂಚಕ್ಕೆ ಕಾಲಿಟ್ಟ ಹಾಗಿತ್ತು. ಹಾಗೆ ಗೋಡೆ ಹಿಡಿದು ಕೊಂಡು ಹೇಗೋ ಮಾಡಿ ಟೆರೆಸ್ಸ್ ಮುಟ್ಟಿದೆ. ಹೋದವನೇ ಹಾಗೆ ಕುಸಿದುಬಿದ್ದೆ. ೪ ನಿಮಿಷ ಬೇಕಾಯ್ತು ಸಾವರಿಸಿಕೊಳ್ಳೊಕೆ. ಬಿದ್ದಲ್ಲಿಂದಲೇ ಮುಖ್ ಮೇಲೆ ಮಾಡಿ ಮತ್ತೆ ಆಕಾಶದತ್ತ ನೋಡಿದೆ. ತಿಳಿ ಹಸಿರು ಬಣ್ಣದ ಆಕಾಶ. ಅಲ್ಲಲ್ಲಿ ಚದುರಿದ ಎಲೆ ಹಸುರಿನ ಮೋಡಗಳು! ಮೆಲ್ಲಗೆ ಎದ್ದು ಅಲ್ಲಿಂದ ಸುತ್ತಮುತ್ತೆಲ್ಲಾ ಕಣ್ಣು ಹಾಯಿಸಿದೆ. ರೋಡಿನ ಬದಿಯೆಲ್ಲಾ ನೀಲಿ ಮರಗಳು, ಹಸಿರು ಜೀನ್ಸ್ ತೊಟ್ಟು ಒಡಾಡೊ ಜನಗಳು. ಈ ಲೊಕದಲ್ಲಿ ಇಷ್ಟು ಬಿಟ್ಟರೆ ಬೇರೆಲ್ಲಾ ಮೊದಲ ಲೋಕದ ಹಾಗೆಯೇ ಇತ್ತು. ಒಂದೇ ವ್ಯತ್ಯಾಸ, ಹಸಿರಿರ ಬೇಕಾದದ್ದೆಲ್ಲಾ ನೀಲಿಯಾಗಿದ್ದವು, ನೀಲಿಯಾಗಿರಬೇಕಾಗಿದ್ದವು ಹಸಿರಾಗಿದ್ದವು. ಜನಗಳಿಗೆ ಇದರ ಪರಿವೇ ಇರಲಿಲ್ಲ. ತೀರ ಸಹಜ ಎನ್ನುವಂತೆ ಇದ್ದರು.

ಏನಿದು? ನಾನು ಇಲ್ಲಿಗೇಕೆ ಬಂದೆ ಅಂತ ತಿಳ್ಕೊಳ್ಲಿಕ್ಕೆ ಕೆಳಗಿಳಿದು ಹೋದೆ. ನಾಲ್ಕು ಜನಗಳನ್ನ ವಿಚಾರಿಸಿಯೂ ನೋಡ್ದೆ. ಹುಚ್ಚನನ್ನು ನೋಡುವ ತರ ಕೆಕ್ಕರಿಸಿ ನೋಡಿ ಹೋದರು. ಎಲ್ಲಾ ವಿಚಿತ್ರ. ಏನೂ ಅರ್ಥ ಆಗ್ತಿಲ್ಲ. ಸುಮ್ನೆ ಹೋಗಿ ಆ ನೀಲಿ ಹುಲ್ಲು ಹಾಸಿನ ಮೇಲೆ ಕುಳಿತೆ. ನನ್ನನ್ನ ನೋಡಿಕೊಂಡು ಹೊಗ್ಲಿಕ್ಕೆ ಸ್ನೇಹಿತರು ಬಂದು ಹೋದ್ರು. ಆದ್ರೂ ಅವ್ರೆಲ್ಲಾ ಮಾಮೂಲಾಗಿಯೇ ಇದ್ರು. ಆವಾಗ ಎಲ್ಲ ಸ್ವಲ್ಪ ಸ್ವಲ್ಪವಾಗಿ ಅರ್ಥ ಆಗೊಕ್ಕೆ ಶುರು ಆಯಿತು. ಅಲ್ಲೇ ಇದ್ದ ಒಬ್ಬ ಸಣ್ಣ ಹುಡುಗನ್ನ ಕರೆದೆ. ನನ್ನ ಪ್ರಶ್ನೆಗೆ ಉತ್ತರ ಹೇಳಿದ್ರೆ ೧ ರೂಪಾಯಿ ಕೊಡ್ತಿನಿ ಅಂತ ಆಸೆ ಹುಟ್ಟಿಸಿ, 'ಇದ್ಯಾವ ಬಣ್ಣ?' ಅಂತ ಮರದ ಕಡೆಗೆ ಬೊಟ್ಟು ಮಾಡಿದೆ. ತಟಕ್ಕಂತ 'ಹಸಿರು' ಅಂದ.

ತಲೆ ಓಡಲಿಕ್ಕೆ ಶುರು ಮಾಡಿತು. ನಾನು ಯಾವುದೇ ಬೇರೆ ಲೋಕಕ್ಕೆ ಬಂದಿಲ್ಲ ಅಂತ ಗೊತ್ತಾಯ್ತು. ಹುಟ್ಟಿದಾಗಿನಿಂದಲೂ ಗಿಡಗಳೆಲ್ಲಾ ಹಸಿರೆಂದು ನಂಬಿದ್ದ ಹುಡುಗನಿನ್ಗೆ ಅವು ಹಸಿರಾಗೆ ಕಂಡಿದ್ದವು. ನನ್ನ ಮೊದಲ ಕಣ್ಣುಗಳಲ್ಲಿ ನೋಡಿದ್ದಾಗ ನನಗೂ ಅವು ಹಸಿರಾಗೆ ಕಂಡಿದ್ದು. ಈ ಪುಣ್ಯಾತ್ಮನ ಕಣ್ಣುಗಳಿಗೆ ಅವು ನೀಲಿಯಾಗಿ ಕಾಣಿಸ್ತಿವೆ. ಆದ್ರೆ ಅವರು ಆ ನೀಲಿಯ ಬಣ್ಣವನ್ನೇ ಹಸಿರಂತ ನಂಬಿದ್ರು. ನಂಬಿರಲೇಬೇಕು. ಯಾಕೆಂದ್ರೆ ಅವರು ಯಾವುದೇ ಹಸಿರು ಬಣ್ಣ ನೊಡಿದರೂ ಅದು ನೀಲಿಯಾಗೇ ಕಾಣಿಸ್ತಿತ್ತು, ಆದ್ರೆ ಜನ ಆ ಬಣ್ಣಕ್ಕೆ ಇಟ್ಟಿದ್ದ ಹೆಸರು ಹಸಿರು. ಯಾರಿಗೆ ತಾನೇ ಅವರಿಗೆ ಹೇಳೊಕ್ಕಾಗುತ್ತೆ, 'ನೀವು ತಪ್ಪು ತಿಳಿದಿದ್ದೀರ, ನೀವು ಹಸಿರು ಅಂತ ತಿಳಿದಿರೊದೆಲ್ಲಾ ನಿಜವಾಗಿ ನಿಮಗೆ ನೀಲಿಯಾಗಿ ಕಾಣಿಸ್ತಿದೆ' ಅಂತ. ಹಾಗೆ ನೋಡಿದ್ರೆ ನಾನು ಈ ಹಿಂದೆ ನನ್ನ ಕಣ್ಣಲ್ಲಿ ನೋಡಿದ್ದ ಹಸಿರು ಬಣ್ಣ ನಿಜವಾಗಿಯೂ ಹಸಿರಾ? ಹಾಗಾದ್ರೆ ಈ ಗಿಡಗಳೆಲ್ಲಾ ಕೆಲವರಿಗೆ ಹಳದಿಯಾಗಿ, ಕೆಲವರಿಗೆ ಕೆಂಪಾಗಿ ಕಾಣಿಸ್ತಿರಬಹುದಾ? ತಮಗೆ ಎನೇ ಬಣ್ಣದಲ್ಲಿ ಕಾಣಲಿ ಅದನ್ನ ಹಸಿರಂತಲೇ ನಂಬಿರ್ತಾರೆ. ಅಂದ್ರೆ ಇದು ಕೇವಲ ಹಸಿರಿನ ವಿಷಯವಾಗದೆ ಎಲ್ಲಾ ಬಣ್ಣಗಳಲ್ಲೂ ಹೀಗೆ ಇರಬಹುದಾ? ಇದೇ ಕಾರಣದಿಂದ ನನಗೆ ಆಕರ್ಷಣೆ ಅನ್ನಿಸೊ ವಸ್ತುಗಳು ಕೆಲವರಿಗೆ ಒಂಚೂರೂ ಇಷ್ಟ ಆಗಲ್ವ? ಹಾಗಾದ್ರೆ ನಿಜವಾದ ಹಸಿರು ಬಣ್ಣ ಅಂದ್ರೆ ಯಾವುದು? ಅದನ್ನು ಯಾರು ನೋಡಿರಬಹುದು? ಯಾವ ಆಧಾರದ ಮೇಲೆ ಅದೇ ಅಪ್ಪಟ ಹಸಿರೆಂದು ಹೇಳಬಹುದು? ಒಂದು ವಸ್ತುವಿನಲ್ಲಿ ತಮಗೆ ಕಾಣುತ್ತಿರುವ ಬಣ್ಣವೇ ಇನ್ನೊಬ್ಬರಿಗೆ ಕಾಣುತ್ತಿದೆಯಾ ಅಂತ ತಿಳಿದುಕೊಳ್ಳೊದು ಹ್ಯಾಗೆ? ಈ ಎಲ್ಲಾ ಪ್ರಶ್ನೆಗಳು ಕೇವಲ ಬಣ್ಣಕ್ಕೆ ಅನ್ವಯಿಸುತ್ತಾ ಅಥವಾ ಆಕಾರ, ಗಾತ್ರ, ತೂಕ, ಮಾತು, ಭಾವನೆ ಎಲ್ಲಾ ಇದೆ ನಿಯಮಕ್ಕೆ ಒಳಪಟ್ಟಿದೆಯಾ? ತಲೆ ಸುತ್ತಿ ಬಂದಂತಾಯಿತು. ಕಣ್ಣೆಲ್ಲಾ ಮಬ್ಬಾಗ್ತಾ ಬಂತು.

ಧಡಕ್ ಅಂತ ಎದ್ದು ಕೂತೆ. ಎನೋ ಕನಸು. ಕರೆಂಟ್ ಬೇರೆ ಹೋಗಿತ್ತು. ಹಾಸ್ಟೆಲ್ ನ ನನ್ನ ರೂಮ್ ಮೇಟ್ ನೆಮ್ಮದಿಯಾಗಿ ಮಲ್ಕೊಂಡಿದ್ದ. ಸಣ್ಣಗೆ ಸೊಳ್ಳೆಯ ಝೇಂಕಾರ ಕೇಳಿಸ್ತಿತ್ತು. ಬಾಯಾರಿದಂತಾಗಿ ಮೆಸ್ಸ್ ಗೆ ಹೋಗಿ ನೀರುಕುಡಿದೆ. ಕರೆಂಟ್ ಬಂತು. ವಾಪಾಸ್ ಬರ್ತಾ ಟ್ಯೂಬ್ ಲೈಟ್ ಬೆಳಕಲ್ಲಿ ಈಗ ಬೆಳಿತಿದ್ದ ಬೇವಿನ ಮರ ನೋಡಿದೆ. ಹಸಿರಾಗೇ ಇತ್ತು. ಹಸಿರಾಗಿತ್ತಾ? ಹಸಿರೆಂದರೆ ಇದೇನಾ? ಅಯ್ಯೋ ಹೀಗೆ ಯೋಚಿಸ್ತಿದ್ರೆ ರಾತ್ರಿ ಎಲ್ಲಾ ನಿದ್ದೆ ಬರಲ್ಲ, ನಾಳೆ ಬೇರೆ ಸಂಬಂಧಿಕರ ಮನೆಗೆ ಹೋಗಬೇಕು ಅಂತ ನೆನಪಾಗಿ ಮುಸುಗೆಳೆದು ಮಲಗಿದೆ. ಫ್ಯಾನ್ ಮೆಲ್ಲಗೆ ಶಬ್ದ ಮಾಡ್ತಿತ್ತು. ಜೋಗುಳ ಹಾಡಿದ ಹಾಗೆ,

ಕೀ.. ಕೀ.. ಕೀ..

Tuesday, September 11, 2007

ಮೊದಲ ಸಾವು...

ನಾನು ಎರಡರಿಂದ ನಾಲ್ಕನೇ ತರಗತಿವರೆಗೆ ಓದಿದ್ದು, ನನ್ನ ಅತ್ತೆಯ ಮನೆಯಲ್ಲಿದ್ದು. ಅದು ಬೆಳಗ್ಗೆಯೊ ಅಥವಾ ಮಧ್ಯಾನ್ಹವೋ ಸರಿಯಾಗಿ ನೆನಪಿಲ್ಲ. ಆದರೆ ಅದು ರಜಾದಿನವಂತೂ ಹೌದು, ಯಾಕೆಂದರೆ ನಾನೂ ಮತ್ತು ಅಕ್ಕ ಶಾಲೆಗೆ ಹೋಗಿರಲಿಲ್ಲ. ಅಂದಾಜು ಹನ್ನೊಂದೋ ಹನ್ನೆರಡೋ ಆಗಿರಬಹುದು. ಹಿತ್ತಲಲ್ಲಿ ಇದ್ದ ಮರದ ಬುಡದಲ್ಲಿ ಹಸಿ ಮಣ್ಣಲ್ಲಿ ಗುಂಡಿ ತೋಡಿ ಏನೋ ಆಟಾಡ್ತಿದ್ದೆ. ಮನೆಗೆ ಯಾರೋ ಬಂದಿದಾರಂತ ನನ್ನ ೧೪ ನೇ sense ಹೇಳಿದಾಗ, ಬಾನಿಯಲ್ಲಿದ್ದ ನೀರಿನಲ್ಲಿ ಕೈ ತೊಳೆದುಕೊಂಡು ಒಳಗೋಡಿದೆ. ಅದೇ ಊರಲ್ಲಿರುತಿದ್ದ, ಮಾಮನ ಸಂಬಂಧಿಕರೊಬ್ಬರು ಕಬ್ಬಿಣದ ಕುರ್ಚಿಯಲ್ಲಿ ಕುಳಿತಿದ್ದು ನೋಡಿ ಆ ೧೪ ನೇ sense ಗೆ ಒಂದು ಸರ್ತಿ ಬೆನ್ನು ತಟ್ಟಿದೆ, ಖುಶಿಯಿಂದ. ಆದರೆ ಆಮೇಲೆ ಖುಶಿಯಾಗಲಿಲ್ಲ. ಅವರ ಕುರ್ಚಿಯ ಮುಂದೆ ಕುಳಿತಿದ್ದ ಅತ್ತೆ ಕಣ್ಣಲ್ಲಿ ನೀರಿತ್ತು. ಮುಖದಲ್ಲಿ ಅಳುವಿತ್ತು. ೩ ನಿಮಿಷ ಆದಮೇಲೆ ತಿಳೀತು, ತಾತ ತೀರಿಕೊಂಡರು ಅಂತ. ಆಗ ನಮ್ಮ ಮನೆಯಲ್ಲಿ ಫೋನ್ ಇರದ ಕಾರಣ ನನ್ನ ದೊಡ್ಡಪ್ಪ ಮತ್ತು ಕಕ್ಕ ಇವರಿಗೆ ಫೋನ್ ಮಾಡಿ ತಿಳಿಸುವಂತೆ ಹೇಳಿದ್ದರು.

ಮನೆಯಲ್ಲಿದವರೆಲ್ಲಾ ಅಳಲಿಕ್ಕೆ ಶುರು ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲೇ ಸುದ್ದಿ ತಿಳಿದು, ಮಾಮ ಕಾಲೇಜ್ ಇಂದ ಮನೆಗೆ ಬಂದ್ರು. ಅಳ್ತಾನೇ ಎಲ್ಲಾ ತಯಾರಾಗ್ತಿದ್ದರು. ಚಿಕ್ಕವನಾಗಿದ್ದರಿಂದ ನನಗೆ ಅರ್ಥ ಆಗ್ತಿರಲಿಲ್ಲ, ಅಳಬೇಕಾ ಬೇಡ್ವಾ ಅಂತ. ಅರ್ಧ ತಾಸಿನೊಳಗೆ ಎಲ್ಲಾ ಬಸ್ ಸ್ಟಾಂಡ್ ಅಲ್ಲಿ ಇದ್ವಿ. ಸಿಕ್ಕಿದ ಬಸ್ ಹತ್ತಿ ೪೦ ಕಿಮೀ ದೂರದಲ್ಲಿದ್ದ ತಾತನ ಊರಿಗೆ ಹೊರಟಾಯಿತು. ಸಾಯುವುದು ಅಂದರೆ ಏನು ಎನ್ನುವ ಸರಿಯಾದ ಕಲ್ಪನೆ ಅಥವಾ ಅನುಭವ(!) ಇರದ ನನಗೆ ಅದು ಬೇರೆಯವರ ಮೇಲೆ ಬೀರಿದಷ್ಟು ಪರಿಣಾಮ ನನ್ನ ಮೇಲೆ ಬೀರಿರಲಿಲ್ಲ. ಎಲ್ಲರ ಅಳು ನೋಡಿ ಸಿಕ್ಕಾಪಟ್ಟೆ ಕೆಟ್ಟದ್ದೇ ಇರಬೇಕಂತ ಅನಿಸಿ ಆಗಾಗ ಕಣ್ಣಿಂದ ನಾಲ್ಕು ಹನಿಗಳು ಉದಿರುತಿದ್ವು. ಆದರೆ ಬಹಳ ದಿನಗಳ ಮೇಲೆ ತಾತನ ಊರಿಗೆ ಹೋಗ್ತಿದಿನಲ್ಲಾ, ನನ್ನ ವಯಸ್ಸಿನ ಆಸುಪಾಸಿನವರಾದ ದೊಡ್ಡಪ್ಪನ ಮಕ್ಕಳು, ಇನ್ನೊಬ್ಬ ಅತ್ತೆಯ ಮಕ್ಕಳು, ಚಿಕ್ಕಪ್ಪನ ಮಕ್ಕಳು ಸಿಗುತ್ತಾರಲ್ಲಾ ಅಂತ ಒಳಗೊಳಗೇ ಸ್ವಲ್ಪ ಸ್ವಲ್ಪ ಖುಶಿಯೂ ಆಗ್ತಿತ್ತು. ಪಕ್ಕದಲ್ಲಿ ಕುಳಿತಿದ್ದವರೆಲ್ಲಾ ಆಗಾಗ ತಾತನನ್ನ ನೆನೆಸಿಕೊಂಡು ಕಣ್ಣೀರು ಹಾಕ್ತಿದ್ರು. ಸ್ವಲ್ಪ ಹೊತ್ತಿನಲ್ಲೇ ನಿದ್ದೆಬಂತು, ಮಲಗಿಕೊಂಡೆ.

ತಾತ ಎಂಬ ಶಬ್ದ ಎಲ್ಲಿಯಾದರೂ ಕೇಳಿದರೆ ನನ್ನ ಮನಸ್ಸಿನಲ್ಲಿ ಮೂಡುವ ಮೊದಲ ಚಿತ್ರ ಅಂದ್ರೆ, ತಣ್ಣನೆಯ ಗಾಳಿ, ಪಕ್ಕದಲ್ಲಿ ಹುಣಸೆ ಮರಗಳ ಸಾಲು, ಬಿಳಿ ಅಂಗಿ ಮತ್ತು ಧೋತಿ ಉಟ್ಟು, ಒಂದು ಕೈಯಲ್ಲಿ ಧೋತಿಯ ಚುಂಗು, ಇನ್ನೊಂದರಲ್ಲಿ ನಮ್ಮಲ್ಲಿ ಯಾರಾದರೊಬ್ಬರ ಕೈ ಹಿಡಿದುಕೊಂಡು, ಸಾಯಂಕಾಲ ೫ ಘಂಟೆಗೆ ವಾಕಿಂಗ್ ಗೆ ಕರೆದುಕೊಂಡು ಹೋಗುತಿದ್ದ ನನ್ನ ತಾತ.

ತಾತನ ಮನೆಯ ಹತ್ತಿರವೇ ಇರುವ ಹಳೇ ಬಸ್ ಸ್ಟ್ಯಾಂಡ್ ಅಲ್ಲಿ ಇಳಿದು ಮನೆ ಕಡೆ ಹೊರಟೆವು. ಮನೆ ನೋಡಿ ನಾನು ಹೆಣೆದಿದ್ದ ಸಾವಿನ ಮನೆಯ ಕಲ್ಪನೆ ದಾರಿಯಲ್ಲೆಲ್ಲೋ ಕಳೆದುಹೋದ ಹಾಗೆ ಅನ್ನಿಸ್ತು. ಮನೆ ಸುತ್ತಮುತ್ತೆಲ್ಲಾ ಜನ ತುಂಬಿಕೊಂಡಿದ್ರು. ಅಲ್ಲಲ್ಲಿ ಮುಸುಮುಸು ಅಳು ಕೇಳಿಸ್ತಿತ್ತು. ಮನೆಯೊಳಗೆ ಕಾಲಿಟ್ಟ ತಕ್ಷಣ ಇದ್ದಕ್ಕಿದ್ದಂತೇ ಎಲ್ಲರ ಅಳು ಜೋರಾಯಿತು. ಚಿಕ್ಕವನಾಗಿದ್ದರಿಂದ ಮುಂದೆ ಏನು ನಡಿತಿದೆ ಅಂತ ನೋಡೋ ಕುತೂಹಲ ಆದ್ರೆ ಎನೂ ಕಾಣಿಸ್ತಿಲ್ಲ, ಎಲ್ಲಾ ಅಡ್ಡ ನಿಂತಿದಾರೆ. ಕಷ್ಟಪಟ್ಟು ತೂರಿಕೊಂಡು ಒಳಗ್ಹೋದೆ. ವರಾಂಡದಲ್ಲಿ ಗೋಡೆಯ ಪಕ್ಕ ತಾತನನ್ನ ಮಲಗಿಸಿದ್ದರು. ಮೊದಮೊದ್ಲಿಗೆ ಗುರ್ತು ಹಿಡಿಲಿಕ್ಕೇ ಆಗ್ಲಿಲ್ಲ. ಅವರ ಮುಖದಲ್ಲೊಂದು ಕಳೆ ಕಳೆದ್ಹೋಗಿತ್ತು. ಮುಖ ಕಾಣುವಷ್ಟು ಬಿಟ್ಟು ಬಿಳಿಬಟ್ಟೆ ಹೊದಿಸಿದ್ರು. ಹಣೆಗೊಂದು ಸಣ್ಣ ಕುಂಕುಮ, ಕೊರಳಿಗೊಂದು ಮಲ್ಲಿಗೆ ಹಾರ. ಆದ್ರೆ ತಾತನ ಎತ್ತರವ್ಯಾಕೊ ಕಡಿಮೆಯಾಗಿದೆಯಲ್ಲಾ? ಸಾಯುವಾಗ ಎಲ್ಲರೂ ಸ್ವಲ್ಪ ಗಿಡ್ಡಕಾಗ್ತಾರಾ ಅಂತ ಅನಿಸ್ತು. ಆಮೇಲೆ ಯಾರೋ ಹೇಳಿದ ಮೇಲೆ ತಿಳಿತು, ಸತ್ತಾಗ ಕಾಲು ಚಕ್ಳಂಬಕ್ಳ ಹಾಕಿ ಮಲಗಿಸ್ತಾರೆ ಅಂತ. ಆವಾಗ ಕತ್ತೆತ್ತಿ ಸುತ್ತಮುತ್ತ ಎಲ್ಲಾ ನೋಡಿದೆ. ಎಲ್ಲಾ ನನ್ನ ಅತಿ ಹತ್ತಿರದ ಸಂಬಂದಿಗಳು. ಅಂತಹ ದುಃಖದ ಸಂದರ್ಭದಲ್ಲೂ ಅವರನ್ನೆಲ್ಲಾ ನೋಡಿ ಖುಶಿಯಾಯ್ತು. ಆದ್ರೆ ಅದನ್ನ ವ್ಯಕ್ತ ಪಡಿಸುವುದು ಹ್ಯಾಗೆ ಅಂತ ಗೊತ್ತಾಗ್ಲಿಲ್ಲ. ಯಾರನ್ನಾದರೂ ಬಹಳ ದಿನಗಳ ಮೇಲೆ ನೋಡಿದರೆ ಮುಖದಲ್ಲೊಂದು ಖುಶಿಯ ಮುಗುಳ್ನಗೆ ಇಟ್ಟುಕ್ಕೊಂಡು ಮಾತನಾಡಿಸಿಯೇ ಅಭ್ಯಾಸ. ಗೊತ್ತಿರದಿದ್ದಾಗ ಸುಮ್ಮನಿರುವುದೇ ವಾಸಿ ಅಂತ ಯಾರಾದ್ರೂ ನನ್ನ ಕಡೆ ತಿರುಗಿದಾಗ, ಕಷ್ಟಪಟ್ಟು ಅಳು ನಗುವಿಲ್ಲದ ಮುಖ ಮಾಡ್ತಿದ್ದೆ. ಅಷ್ಟರಲ್ಲಿ ನನ್ನ ಅತ್ತೆ ಕೆಳಗಡೆ ಬಿದ್ದು, ತಾತನನ್ನ ತಬ್ಬಿಕೊಂಡು, ಜೋರಾಗಿ ಅಳುತ್ತಾ ಎನೋ ಬಡಬಡಾಯಿಸೊದಿಕ್ಕೆ ಶುರು ಮಾಡಿದ್ರು. ಇಷ್ಟೊತ್ತು ಸರಿಯಾಗಿದ್ರಲ್ಲಾ, ಈಗೇನಾಯಿತು ಅಂತ ಭಯ ಆಯ್ತು. ಸುಮ್ನೆ ಹೋಗಿ ಅಲ್ಲೇ ಇದ್ದ ಕಟ್ಟೆಯ ಮೇಲೆ ಕುಳಿತ್ಕೊಂಡೆ.

ಹಿಂಗೇ ಘಂಟೆಗಳು ಉರುಳುತಿದ್ದಂಗೆ ಎಷ್ಟೋ ಜನ ಬಂದ್ರು, ಹೋದ್ರು. ಹೊಸದಾಗಿ ಯಾರಾದರೂ ಬಂದಾಗೆಲ್ಲಾ ಎಲ್ಲರ ಅಳು ಜೋರಾಗ್ತಿತ್ತು. ಬಂದವರು ಹಳಬರಾದ ಮೇಲೆ ಸ್ವಲ್ಪ ಕಡಿಮೆ ಆಗ್ತಿತ್ತು. ಪ್ರತಿಯೊಬ್ಬರು ಅಳುವ ರೀತಿ ಬೇರೆಯಾಗಿತ್ತು, ದುಃಖ ಹೊರಗೆಡುವ ರೀತಿ ಬೇರೆಯಾಗಿತ್ತು. ಅವರನ್ನೆಲ್ಲಾ ನಾನು ಮೊದಲಿಗೆ ಬಹಳಷ್ಟು ಸಾರಿ ನೋಡಿದ್ದೆ ಆದರೂ ಈ ರೀತಿ ಅಲ್ಲ. ಪ್ರತಿಯೊಬ್ಬರೂ ಹ್ಯಾಗ್ಯಾಗೋ ಅಳೋದು ನೋಡಿ ವಿಚಿತ್ರ ಅನ್ನಿಸ್ತಿತ್ತು. ನೋಡಿದರೆ ಬಾರಿ ಗಟ್ಟಿಗರು ಅನ್ನಿಸುವ ಕೆಲವು ಗಂಡಸರೂ ಕೂಡ ಅಳ್ತಿದ್ರು. ಸುಮ್ಮನೆ ಕುಳಿತವನಿಗಿನ್ನೇನು ಕೆಲ್ಸ, ಬೇರೆಯವರನ್ನ ವೀಕ್ಷಿಸೋದು ಬಿಟ್ಟು.

ದೂರದೂರಲ್ಲಿ ಇರ್ತಿದ್ದ ಅಪ್ಪ ಅಮ್ಮ ಬಂದಮೇಲೆ ತಾತನನ್ನ ಕರೆದುಕೊಂಡು ಹೋಗೋಕ್ಕೆ ಎಲ್ಲಾ ಏರ್ಪಾಡು ಮಾಡಿದ್ರು. ತಾತನ್ನ ಎತ್ತಿ ಅಂಗಳದಲ್ಲಿ ಚಟ್ಟದ ಮೇಲೆ ಮಲಗಿಸಿದ್ರು. ಎಲ್ಲರಂತೆ ನಾನೂ ಹೋಗಿ ನಮಸ್ಕಾರ ಮಾಡಿ ಬಂದೆ. ನನಗೇನು ಗೊತ್ತಿತ್ತು, ಅದೇ ಕೊನೆಯಬಾರಿಗೆ ಅವರನ್ನ ನೋಡುವುದು ಅಂತ, ಇನ್ನುಮುಂದೆ ಅವರು ನಮ್ಮ ಜೊತೆಯಲ್ಲಿರುವುದಿಲ್ಲ ಅಂತ. ಕಣ್ಣೆದುರಿಗೆ ನಡಿತಿರುವುದೆಲ್ಲಾ ನೋಡಿ ಹೌದೆನ್ನಿಸಿದ್ರೂ, ಅರ್ಥ ಮಾಡಿಕೊಳ್ಳದಾಗದಂತಹ ಪರಿಸ್ಥಿತಿ. ಎಲ್ಲರೂ ಕೊನೆಯಬಾರಿಗೆ ನಮಸ್ಕಾರ ಮಾಡಿದ ಮೇಲೆ ನಾಲ್ಕುಜನ ಸೇರಿ ಎತ್ಕೊಂಡು ಹೊರಟ್ರು, ಹಿಂದೆ ಇಷ್ಟೊಂದು ಜನ. ನಾನೂ ಅವ್ರ ಜೊತೆಗೆ ಹೊರಟಿದ್ದೆ, ಯಾರೋ ಬೈದು ಎಳ್ಕೊಂಡು ನಿಲ್ಲಿಸಿದ್ರು, 'ಹಾಗೆಲ್ಲ ಹೋಗಬಾರದು'ಅಂತ ಹೇಳಿ. ತಾತನ್ನ ಸುಡ್ತಾರೆ ಅಂತ ಕೇಳಿದ್ದೆ, ಅವಾಗ ಎಷ್ಟು ನೋವಾಗುತ್ತೋ ಅಂತ ದುಃಖ ಆಯ್ತು.

ರಾತ್ರಿ ಎಲ್ಲರದೂ ಸ್ನಾನ ಆಯ್ತು. ೧೩ ದಿವ್ಸ ಮೈಲಿಗೆ ಅಂತ ಯಾರನ್ನೂ ಅಡುಗೆಮನೆ ಒಳಗೆ ಬಿಡ್ತಿರಲಿಲ್ಲ. ಬರೇ ನನ್ನ ಅತ್ತೆಯ ಮನೆಯವರು ಅಡುಗೆ ಮಾಡಿ ಬಡಿಸ್ತಿದ್ರು. ೨ ದಿವ್ಸದಲ್ಲೇ ಮನೆಯ ವಾತಾವರಣ ಎಲ್ಲಾ ತಿಳಿಯಾಯ್ತು. ದೊಡ್ಡವರು ಹೇಗಿದ್ದರೊ ಗೊತ್ತಿಲ್ಲ, ನಾವು ಹುಡುಗರಂತೂ ಖುಶಿಯಿಂದ ಆಟ ಆಡಿಕೊಂಡಿದ್ವಿ. ಎಲ್ಲಾ ಮಕ್ಕಳು ಸೇರಿದ್ದರಿಂದ ಅದೊಂದು ಚಿಕ್ಕ ಬೇಸಿಗೆ ರಜದ ತರವೇ ಆಗಿತ್ತು. ಮಾಮೂಲಿಯಂತೆ ಉಸುಗಿನಲ್ಲಿ ಮನೆಕಟ್ಟೊದು, ಹುಣಸೇಹಣ್ಣು ಉಪ್ಪು ಖಾರ ಕುಟ್ಟಿ ಐಸ್ ಕ್ರೀಮ್ ಕಡ್ಡಿಗೆ ಸಿಗಿಸ್ಕೊಂಡು ಮುಖ ಹುಳ್ಳಗೆ ಮಾಡ್ಕೊಂಡು ತಿನ್ನೋದು, ಕಳ್ಳ ಪೋಲಿಸ್ ಆಟ ಆಡೋದು, ಚೌಕಬಾರ ಆಡೊದು, ಎಲ್ಲಾ ನಡೆದಿತ್ತು, ಪುರಸೊತ್ತು ಇಲ್ಲದ ಹಾಗೆ.

ಸಾಯಂಕಾಲ ಅದೇ ಹುಣಸೇ ಮರಗಳ ಸಾಲಿನ ರಸ್ತೆಯಲ್ಲಿ ಎಲ್ಲಾ ಹುಡುಗ್ರೂ ಜೋರಾಗಿ ನಗಾಡ್ತ, ಗಲಾಟೆ ಮಾಡ್ಕೊಂಡು ವಾಕಿಂಗ್ ಅಂತ ಹೋಗಿಬರ್ತಿದ್ವಿ. ಪಕ್ಕದಲ್ಲಿ ತಾತ ಇಲ್ಲದಿರುವುದು ಪಕ್ಕನೆ ನೆನಪಾಗ್ತಿರಲಿಲ್ಲ. ಎಲ್ಲವನ್ನೂ ಬೇಗನೆ ಮರೆಯುವ ಮನಸ್ಸೋ ಅಥವಾ ಇಷ್ಟು ದಿವಸ ಜೊತೆಗಿದ್ದವರು ಈಗ ಇಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳೊಕ್ಕಾಗದೇ, ಇನ್ನೂ ಜೊತೆಯಲ್ಲೇ ಇದ್ದಾರೆ ಅಂತ ನಂಬುವ ಮನಸ್ಸೋ? ಗೊತ್ತಿಲ್ಲ ನಾನಿನ್ನೂ ಚಿಕ್ಕವನು.

Monday, July 23, 2007

ತಿರುವು...

ಬೆಳಬೆಳಗ್ಗೆ ೮ ಘಂಟೆಗೆನೇ ಎದ್ದು ರೂಮ್ ಹೊರಗಡೆ ಬಂದೆ. ನಾನೇ ಸೋಮಾರಿ ಎಂದ್ರೆ ಸೂರ್ಯ ನನಗಿಂತ ಸೋಮಾರಿ. ಆ ಚುಮುಚುಮು ಚಳಿಗೆ ಎದ್ದೇಳಕ್ಕೆ ಆಗದೆ ಇನ್ನೂ ಮುಖ ಕೆಳಗೆ ಮಾಡಿಕೊಂಡು ಮಲಗಿದ್ದ. ನಾನು ಎದ್ದ ಮೇಲೆ ನನ್ನ ಗೆಳಯ ಪುತ್ತೂರ್ ( ಪುತ್ತೂರು ವೆಂಕಟೇಶ ) ಇನ್ನೂ ಮಲಗಿರೋದು ನನ್ನ ಕಣ್ಣುಗಳಿಂದ ನೋಡಲಿಕ್ಕೆ ಆಗ್ಲಿಲ್ಲ. ಕಷ್ಟಪಟ್ಟು ಅವನನ್ನು ಎಬ್ಬಿಸಿದೆ. ನನ್ನನ್ನು ಬಾಯಿತುಂಬ ಬೈದುಕೊಳ್ಳುತ್ತಲೇ ಎದ್ದ. ಇಬ್ರಿಗೂ ಹಾಸ್ಟೆಲ್ ಭಟ್ಟರ ಟೀ ಕುಡಿಲಿಕ್ಕೆ ಮನಸಾಗ್ಲಿಲ್ಲ, ಹತ್ತಿರದ ಪಿ.ಡಿ(ಫಲಹಾರ ದರ್ಶಿನಿ) ಕಡೆ ಹೆಜ್ಜೆ ಹಾಕಿದೆವು. ಆ ಚಳಿಯಲ್ಲಿ ಕೈಗಳನ್ನ ಜೇಬಿನೊಳಗೆ ಇಳೆಬಿಟ್ಟುಕೊಂಡು ಹೊಗೋದೊ ಬೇಡವೊ ಅನ್ನೊ ಹಾಗೆ ಮೆಲ್ಲಗೆ ಕಾಲು ಎಳಿತಿದ್ವಿ.

ಅಲ್ಲಿಯ ವೇಟರ್ ಬಂದು ನಮ್ಮ ತಿಂಡಿ ಮತ್ತು ಎರಡು ಟೀಯ ಆರ್ಡರನ್ನ ಗೀಚಿಕೊಂಡು ಹೋದ. ಮುಂದೇನು ಮಾಡುವುದು ಅಂತ ಗೊತ್ತಾಗದಿದ್ದಾಗ ಅಕ್ಕಪಕ್ಕದ ಟೇಬಲ್ ಗಳ ಮೇಲೆ ಕಣ್ಣು ಹಾಯಿಸಿದೆ. ಯಾವ ಮುಖದಲ್ಲೂ ಒಂದು ಕಳೆ ಅಂತ ಇರಲಿಲ್ಲ. ಎದ್ದಿದೇವೆ ಅನ್ನೋ ಒಂದೇ ಕಾರಣಕ್ಕೆ ಅಲ್ಲಿ ಬಂದು ಕುಳಿತುಕೊಂಡಿದ್ರು. ಆ ಹೊತ್ತಿಗೆ ಸುಮಾರು ೩೫ ರ ಆಸುಪಾಸಿನ ಓರ್ವ ವ್ಯಕ್ತಿ ಮತ್ತು ಒಬ್ಬ ಹುಡುಗ ಬಂದು ನಮ್ಮ ಪಕ್ಕದ ಟೇಬಲಲ್ಲಿ ಕುಳಿತರು. ಅವರು ತಂದೆ ಮಕ್ಕಳೆಂದು ಮುಂದೆ ಅವರ ಮಾತು ಕದ್ದಾಲಿಸಿದ ಮೇಲೆ ತಿಳಿತು. ಅಪ್ಪ ಮಗನಿಗೆ ತನ್ನ ಮೊಬೈಲಲ್ಲಿ ಬಂದ ಒಂದು ಮೆಸ್ಸೇಜ್ ಅನ್ನು ಹಿಂಗೆ ಓದಿ ಹೇಳ್ತಿದ್ದ,

"There were 5 frogs sitting on a log. Suddenly one frog decided to jump into ater.

so now how many frogs are there on the log?

A: Five only, because there is a great difference between deciding and doing..!"

ಅದನ್ನ ಓದಿದ ಮೇಲೆ ಅದರ ಆರ್ಥ ಅವನಿಗೆ ವಿವರಿಸುತ್ತಾ, "ನೋಡು ಮಗು, ನೀನು ಸುಮ್ನೆ 1st rank ಬರಬೇಕು ಅಂತ ಅಂದುಕೊಂಡರೆ ಆಗೊಲ್ಲ, ಅದಕ್ಕೆ ತಕ್ಕ ಪರಿಶ್ರಮನೂ ಪಡಬೇಕು, ದಿನವೂ ನೀನು......." ಹೀಗೆ ಅವನನ್ನ ಹುರಿದುಂಬಿಸುತಿದ್ದ, ಪರೀಕ್ಷೆಗಳು ಹತ್ತಿರದಲ್ಲಿದ್ವು ಅಂತ ಕಾಣಿಸುತ್ತೆ.

ಜೀವನದಲ್ಲಿ ಕೆಲವೊಂದು ಅತ್ಯಂತ ಸಣ್ಣ ಸಣ್ಣ ಘಟನೆಗಳು ದೊಡ್ಡ ತಿರುವಿಗೆ ಕಾರಣಗಳಾಗುತ್ತವೆ ಅಂತ ಕೇಳಿದ್ದೆ ಆದ್ರೆ ಎಂದೂ ಅನುಭವಿಸಿರಲಿಲ್ಲ. ಆ ತಂದೆ ಮಕ್ಕಳ ಸಂಭಾಷಣೆ ನನ್ನಲ್ಲಿ ಏನೋ ಬದಲಾವಣೆ ತರುತ್ತೆ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಆ ದಿನ ಪೂರ್ತಿ ಅವೇ ಮಾತುಗಳು ಪದೇ ಪದೇ ನೆನಪಾಗುತಿದ್ದವು. ರಾತ್ರಿ ಮಲಗುವಾಗ ನನ್ನ ಬಹು ವರ್ಷದ ಕನಸಾದ, ವೇಗದ ಓಟಗಾರನಾಗಬೇಕೆಂಬ ಆಸೆಯನ್ನ ನನಸು ಮಾಡಲೇ ಬೇಕಂತ ಅನ್ಕೊಂಡೆ.

ಮರುದಿವಸ ಬೆಳಗ್ಗೆ ೫ ಘಂಟೆಗೆ(!) ಎದ್ದವನೇ ಓಡಲಿಕ್ಕೆ ಹೊರಟೆ. JLB ರೋಡ್ ಅಲ್ಲಿ ೨ ಕಿ.ಮೀ. ಓಡೊವಷ್ಟರಲ್ಲಿ ನನ್ನ ಹೆಣ ಬೀಳುವ ಹಾಗಾಗಿತ್ತು. ಇಷ್ಟು ಜಲ್ದಿ ಸಾಯೊದು ಬೇಡ ಅಂತ ವಾಪಾಸು ನಡಕೊಂಡು ಬಂದೆ. ಅವತ್ತು ದಿನ ಪೂರ್ತಿ ಕಾಲು ನೋವು. ಮರುದಿವ್ಸ ಮತ್ತೆ ಹೋದೆ, ಪರ್ವಾಗಿಲ್ಲ ಓಡಬಹುದು ಅನ್ನಿಸ್ತು. ದಿನ ಕಳೆದ್ಹಂಗೆ ಓಡುವ ದೂರ ಜಾಸ್ತಿ ಮಾಡಿದೆ, ಬೇರೆ ಬೇರೆ ಕಡೆ ಹೋಗ್ಲಿಕ್ಕೆ ಶುರು ಮಾಡ್ದೆ. ಒಂದು ದಿವ್ಸ ಅರಮನೆ ಕಡೆ ಹೋದರೆ, ಇನ್ನೊಂದು ದಿವ್ಸ ಊಟಿ ರೋಡ್ ಗೆ. ಮಳೆ ಬರಲಿ, ಚಳಿಯಾಗಲಿ, ಏನೇ ಆಗ್ಲಿ ಒಂದು ದಿವಸ ಕೂಡ ಓಡುವುದನ್ನ ತಪ್ಪಿಸಲಿಲ್ಲ. ಹೀಗೇ ೩ ತಿಂಗಳು ಕಳೆದ್ಮೇಲೆ, ಮೊದಲನೇ ಸರ್ತಿ ಓಡುತ್ತಾ ಚಾಮುಂಡಿ ಬೆಟ್ಟ ಹತ್ತಿದೆ. ಆಹಾ, ಬೆಟ್ಟದ ತುದಿ ಮುಟ್ಟಿದಾಗ ಆಗುವ ಆನಂದ ವಿವರಿಸಲಿಕ್ಕೆ ಆಗೊಲ್ಲ. ಮುಂದೆ ಅದು ನನ್ನ ದಿನಚರಿಯ ಒಂದು ಅಂಗ ಆಗಿಹೊಯಿತು. ಹಾಸ್ಟೆಲ್ ನಿಂದ ಬೆಟ್ಟದ ಬುಡದವರೆಗೆ ೩ ಕಿ.ಮೀ. ಓಡುವುದು, ಅರ್ಧ ಘಂಟೆಯಲ್ಲಿ ಬೆಟ್ಟದ ಮೆಟ್ಟಲುಗಳನ್ನ ಹತ್ತುವುದು, ಅಲ್ಲಿ ಅರ್ಧ ತಾಸು ಕಳೆದಮೇಲೆ ತಿರುಗಿ ವಾಪಾಸು ಓಡಿಕೊಂಡು ಬರುವುದು. ಹೀಗೆ ಒಂದು ವರ್ಷದವರೆಗೂ ಬೇಜಾರಿಲ್ಲದೆ ನಡೆಸ್ಕೊಂಡು ಬಂದೆ.

ನಾನು ಪಟ್ಟ ಪರಿಶ್ರಮಕ್ಕೆ ಒಂದು ಮೊದಲ ಚಿಕ್ಕ ಪ್ರತಿಫಲ ದೊರೆತದ್ದು ನಾನು ನಮ್ಮ ಯೂನಿವರ್ಸಿಟಿಯ sports meet ಅಲ್ಲಿ ನನ್ನ ಕಾಲೇಜ್ ಅನ್ನು ಪ್ರತಿನಿಧಿಸಿದಾಗ. ೩೦೦೦ ಮೀ ಓಟದಲ್ಲಿ ನನಗೆ ಬಂಗಾರದ ಪದಕ ಸಿಕ್ಕಾಗ. ಸುತ್ತ ನಿಂತಿದ್ದ ಇಷ್ಟು ಜನ ಜೋರಾಗಿ ಚಪ್ಪಾಳೆ ತಟ್ಟಿದಾಗ. ಅಲ್ಲಿಗೆ ಬಂದಿದ್ದ ಕೆಲವು coach ಗಳು ನಂಗೆ ಸ್ಟೇಟ್ ಲೆವೆಲ್ ಅಲ್ಲಿ ಭಾಗವಹಿಸು, ಬಂಗಾರದ ಪದಕ ಖಂಡಿತ ಅಂತ ಬೆನ್ನುತಟ್ಟಿದಾಗ.

ಮುಖದಲ್ಲೊಂದು ಸಣ್ಣ ತೃಪ್ತಿಯ ನಗೆ ಬಂತು.

"ಏನ್ಲೇ ಕಿಸಿತಾ ಇದಿಯಾ..? ನಂದು ತಿಂಡಿ ಮುಗಿದು ಐದು ನಿಮಿಷ ಆದ್ರೂ ನಿಂದಿನ್ನೂ ಮುಗಿತಾನೇ ಇಲ್ಲ. ಜಲ್ದಿ ಜಲ್ದಿ ಮುಗಿಸು. ಮೊದ್ಲೇ ಚಳಿ. ಬ್ಯಾಡ ಅಂದ್ರೂ ಬೆಳಬೆಳಗ್ಗೆನೇ ಎಳಕೊಂಡು ಬಂದಿದಿಯ. ನೆಮ್ಮದಿಯಿಂದ ಮಲಗ್ಲಿಕ್ಕೂ ಬಿಡಲ್ಲ." ಅಂತ ಪುತ್ತೂರ್ ಕರೆದಾಗ್ಲೇ reverse gear ಹಾಕಿ ವಾಪಾಸ್ ಬಂದಿದ್ದು. ಆ ತಂದೆ ಮಗ ಆಗ್ಲೆ ಪಕ್ಕದ ಟೇಬಲ್ ಇಂದ ಎದ್ದು ಹೋಗಿದ್ರು. ಬಿಲ್ಲು ಕೊಟ್ಟು, ೪ ಚಾಕೊಲೇಟ್ ತೆಗೊಂಡು ವಾಪಾಸ್ ಬಂದ್ವಿ, ಜೇಬಲ್ಲಿ ಕೈ ಇಟ್ಕೊಂಡು.

Monday, July 9, 2007

ಚೌಕಟ್ಟು...

ಒಂದು ದಪ್ಪನೆಯ ಡ್ರಾಯಿಂಗ್ ಪುಸ್ತಕ ಮತ್ತು ಒಂದು ಕಲರ್ ಪೆನ್ಸಿಲ್ ಡಬ್ಬ.



ಅಪ್ಪ ತಂದ್ಕೊಟ್ಟಿದ್ದ ಇವೆರಡು ಅಂದ್ರೆ ನಂಗೆ ಎಲ್ಲಿಲ್ಲದ ಇಷ್ಟ. ಯಾವಾಗ್ಲೂ ಜೊತೆಲೀ ಹಿಡ್ಕೊಂಡೆ ತಿರುಗಾಡ್ತಿದ್ದೆ. ಆ ನನ್ನ ಪುಟ್ಟ ಕಣ್ಣಿಗೆ ಕಾಣ್ಸೋ ದೊಡ್ಡ ಪ್ರಪಂಚವನ್ನೆಲ್ಲಾ ಅದ್ರಲ್ಲಿ ಚೆಂದವಾಗಿ ಬಿಡಿಸಿಡಬೇಕೆಂಬ ಆಶೆ. ಮೊದ್ಲೆಲ್ಲಾ ಹಾಳೆ ತುಂಬಾ ಸುಮ್ನೆ ಕರಬರ ಗೀಚುತಿದ್ದವನು ಮೆಲ್ಲಗೆ ಅದು ಇದು ಅಂತ ಬಿಡಿಸ್ಲಕ್ಕೆ ಶುರು ಮಾಡ್ದೆ. ಒಂದು ದಿವಸ ಹೆಂಚಿನ ಮನೆ ಬಿಡ್ಸಿದ್ರೆ ಇನ್ನೊಂದಿವ್ಸ ಬಾವುಟದ ಕಂಬ. ಹೀಗೆ ಮರ, ಗುಡ್ಡ, ಸೂರ್ಯ, ಮೇಜು, ಲೋಟ, ದೋಣಿ, ಅಲ್ಮೇರಾ ಅಂತ ಎನೇನೋ ಗೀಚುತಿದ್ದೆ. ಬರೆದಿದ್ದಕೆಲ್ಲಾ ಬಣ್ಣ ತುಂಬೋದಂದ್ರೆ ನಂಗೆ ಎಲ್ಲಿಲ್ಲದ ಖುಶಿ. ಸೇಬುಹಣ್ಣಿಗೆ ಕೆಂಪು, ಹುಲ್ಲಿಗೆ ಹಸಿರು, ಆಕಾಶಕ್ಕೆ ನೀಲಿ, ಹುಡುಗನ ಚಡ್ಡಿಗೆ ಹಳದಿ, ಚೆಂಡಿಗೆ ಕಂದು, ಕೆಲವೊಮ್ಮೆ ಬೆಟ್ಟಕ್ಕೆ ಗುಲಾಬಿ! ಅಂತ ಎಲ್ಲದಕ್ಕೂ ಗೆರೆ ದಾಟದ ಹಂಗೆ ಬಹಳ ಕಾಳಜಿ ಇಂದ ತುಂಬ್ತಿದ್ದೆ. ಆ ಬಣ್ಣದ ಹಾಳೆಗಳನ್ನ ತೋರಿಸಿದಾಗ ಮಂದಿ ಮೆಚ್ಚಿಕೊಳ್ಳುತಿದ್ದರು.



ಆಗಲೆ ೪ ನೇ ತರಗತಿ ಮುಟ್ಟಿದ್ದೆ. ಮೆಲ್ಲಗೆ ಬುದ್ದಿ ಬೆಳೆಯುತಾ ಇತ್ತು. ನಾಲ್ಕು ಜನ ಎದುರಿದ್ದಾಗ ಯಾವುದನ್ನ ಕೇಳಬೇಕು, ಯಾವುದನ್ನ ಕೇಳಬಾರ್ದು ಎಂದೆಲ್ಲ ತಿಳಿತಾ ಇತ್ತು. ಅಪ್ಪಿ ತಪ್ಪಿ ಎನಾದ್ರೂ ತಪ್ಪು ಮಾಡಿದ್ರೂ ಕೂಡ ಜನ "ಹುಡುಗ ಇನ್ನು ಬೆಳಿತಿದಾನೆ, ತಪ್ಪು ಮಾಡೊದು ಸಹಜ" ಅಂತ ಹೇಳಿ ಸುಮ್ನಾಗ್ತಿದ್ರು. ಎಲ್ಲರಿಗು ಸಹಾಯವಾಗುವಂತ ಯಾವುದೇ ಕೆಲಸ ಮಾಡದಿದ್ರೂ ಬೇರೆಯವರಿಗೆ ಕಷ್ಟ ಮಾತ್ರ ಕೊಡ್ತಿರ್ಲಿಲ್ಲ. ಎಲ್ಲರೂ ನನ್ನ ಮುದ್ದು ಮಾಡೋರೆ.



ಮೆಲ್ಲಗೆ ದಿನ ಕಳೆದಹಂಗೆ ನನ್ನ ಚಿತ್ರಗಳಲ್ಲಿ ಒಂದು ಪ್ರೌಢತೆ ಬಿಂಬಿಸಲಿಕ್ಕೆ ಶುರು ಆಯಿತು. ಈಗ ನನ್ನ ಚಿತ್ರಗಳಲ್ಲಿ ಜಿಂಕೆ ಅಂದರೆ ತಲೆಗೊಂದು ಸೊನ್ನೆ, ಹೊಟ್ಟೆಗೊಂದು ಸೊನ್ನೆ, ಕಾಲುಗಳಿಗೆ ನಾಲ್ಕು ಗೆರೆ ಆಗಿರದೆ, ನಾನು ಹೇಳದೇನೆ ಯಾರಾದರೂ ಅದನ್ನ ನೋಡಿದರೂ ಜಿಂಕೆ ಅಂತ ಕರೆಯುವ ಹಾಗಿರ್ತಿತ್ತು. ಮೊದಲಿನ ಹಾಗೆ ಬಹಳ ವಸ್ತುಗಳನ್ನು ಒಂದೇ ಚಿತ್ರದಲ್ಲಿ ಬಿಡಿಸದೆ, ಒಂದೊಂದೆ ವಸ್ತುವನ್ನು ವಿವರವಾಗಿ ಬಿಡಿಸಲು ತೊಡಗಿದೆ. ಜನ ಕೂಡ ಮೊದಲಿನ ಹಾಗೆ ಬರೆದಿದ್ದಕ್ಕೆಲ್ಲಾ ಹೊಗಳುತ್ತಿರಲ್ಲಿಲ್ಲ. "ಈ ಚಿತ್ರ ಪರವಾಗಿಲ್ಲ", "ಆ ಗಿಳಿಯ ಮೂಗು ಸ್ವಲ್ಪ ಬಾಗಬೇಕಿತ್ತು", "ಏನಿದು, ಹುಲಿನಾ, ಒಳ್ಳೇ ಎಮ್ಮೆ ಕಂಡ ಹಾಗೆ ಕಾಣುತ್ತಿದೆ, ಚೂರೂ ಚೆನ್ನಾಗಿಲ್ಲ" ಅಂತ ತಮಗೆ ಇಷ್ಟ ಬಂದ್ಹಂಗೆ ಅಭಿಪ್ರಾಯ ತಿಳಿಸ್ತಿದ್ರು. ನಾನು ಪ್ರತಿಯೊಂದು ಚಿತ್ರ ಬಿಡಿಸಲು ತೆಗೆದುಕೊಳ್ತಿದ್ದ ಸಮಯವೂ ಏರುತ್ತಾ ಹೊಯಿತು. ಕೊನೆಗೊಮ್ಮೆ ತುಂಬಾ ಸಮಯ ತೆಗೆದುಕೊಂಡು ಪ್ರಶಾಂತ ನೀರಿನ ಮೇಲೆ ದೋಣಿಯಲ್ಲಿ ಕುಳಿತು ಉತ್ಸಾಹದಿಂದ ಹುಟ್ಟು ಹಾಕುತಿದ್ದ ಒಬ್ಬ ಯುವಕನ ಚಿತ್ರ ಬಿಡಿಸಿದೆ. ನನಗಂತೂ ಅದು ಸಿಕ್ಕಾಪಟ್ಟೆ ಹಿಡಿಸಿತು. ನೋಡಿದವರೂ ಅದನ್ನ "ಬಹಳ ಚೆನ್ನಾಗಿದೆ" ಅಂತ ಹೊಗಳಿದರು. ಅದನ್ನ ಚೊಕ್ಕವಾಗಿ ಒಂದು ಪಾರದರ್ಶಕ ಪ್ಲಾಸ್ತಿಕ್ ಚೀಲದಲ್ಲಿ ಹಾಕಿ, ಮನೆಗೆ ಬರುವವರಿಗೆಲ್ಲ ಕಾಣುವ ಹಂಗೆ ಗೋಡೆ ಮೇಲೆ ತೂಗು ಹಾಕಿದೆ.



ಈಗ ನಾನು ಎಲ್ಲರಿಗು ಮೊದಲಿನ ಚಿಕ್ಕ ಮಗುವಾಗಿರ್ಲಿಲ್ಲ. ನನಗೂ ನಾನು ದೊಡ್ಡವನಾಗ್ತಿದಿನಿ ಎಂಬ ಅರಿವು ಉಂಟಾಗ್ತಿತ್ತು. ನನಗೆ ಅಂತ ಜವಬ್ದಾರಿಗಳು ಬರಲಿಕ್ಕೆ ಶುರು ಆದವು. ಅಂಗಡಿಗೆ ಹೋಗಿ ಅಮ್ಮ ಹೇಳಿದ ಸಾಮಾನು ತಂದರೆ ಎರಡು ಚಾಕೊಲೇಟ್ ಸಿಗ್ತಿತ್ತು, ಲೆಕ್ಕದಲ್ಲಿ ಕಡಿಮೆ ಅಂಕ ಸಿಕ್ಕರೆ ಅಪ್ಪನ ಏಟು ಸಿಗ್ತಿತ್ತು, ನಾನು ಬೀದಿ ಬೀದಿ ತಿರುಗೊದು ಜನ ಇಷ್ಟ ಪಡುತ್ತಿರಲಿಲ್ಲ, ಹೀಗೆ ಯಾವುದು ಸರಿ ಯಾವುದು ತಪ್ಪು ಅಂತ ಜನಗಳಿಂದ ತಿಳಿದುಕೊಳ್ಳೊಕೆ ಶುರು ಮಾಡಿದೆ. ನನ್ನದೇ ಅಂತ ಒಂದು ವ್ಯಕ್ತಿತ್ವ ಬೆಳಿತು. ಒಂದು ಹಂತಕ್ಕೆ ಮುಟ್ಟಿದ ಮೇಲೆ ನನ್ನ ನಡುವಳಿಕೆಯಲ್ಲಿ ಉಂಟಾಗುತ್ತಿದ್ದ ಬದಲಾವಣೆ ಬಹಳ ಕಡಿಮೆ. ಒಳ್ಳೆಯದು ಎನ್ನುವ ಅಂಶಗಳನ್ನೆಲ್ಲಾ ನಾನು ಪಾಲಿಸ್ತಿದ್ದೆ. ಆ ಹೊತ್ತಿಗಾಗಲೆ ಹನ್ನೆರಡನೆ ತರಗತಿಯ ಹೊಸ್ತಿಲು ಮೆಟ್ಟಿದ್ದೆ.



ಒಂದು ದಿವಸ ನಾನು ಅಪ್ಪನನ್ನ ಕಾಡಿಬೇಡಿ ಆ ಚಿತ್ರಕ್ಕೊಂದು ಗ್ಲಾಸು ಹೊಂದಿಸಿ ಸುತ್ತ ಸುಂದರ ಮರದ ಕಟ್ಟು ಹಾಕಿಸಿದೆ. ಬಡಗಿಯು ಆ ಚೌಕಟ್ಟಿನ ಮೇಲೆ ಅಲ್ಲಲ್ಲಿ ಚಿತ್ತಾರಗಳನ್ನ ಕೆತ್ತಿದ್ದ. ನೋಡಲು ಮನೋಹರವಾಗಿತ್ತು. ಮನೆಮಂದಿಗೆಲ್ಲ ಅದರಮೇಲೆ ವಿಶೇಷ ಕಾಳಜಿ. ದಿನವೂ ಅದರಮೇಲಿನ ಧೂಳು ಒರೆಸಿಡುತಿದ್ದರು. ಮನೆಗೆ ಬಂದವರೆಲ್ಲಾ "ಓ, ಕಟ್ಟು ಕೂಡಿಸಿದಿರಾ..", "ಎಷ್ಟು ಬಿತ್ತು ಚೌಕಟ್ಟಿಗೆ..?", "ಯಾವ ಮರದ್ದೋ..?" ಅಂತ ಚೌಕಟ್ಟನ್ನೇ ವಿಚಾರಿಸ್ಕೊಳ್ತಿದ್ರು. ಕಡೇಪಕ್ಷ ಮೊದಲನೆ ಸಲ ಮನೆಗೆ ಬಂದವರೂ ಕೂಡ ಚೌಕಟ್ಟನ್ನೇ ಹೊಗಳಿದರು ಹೊರತು ಚಿತ್ರವನ್ನು ಗಮನಿಸಲೇ ಇಲ್ಲ. ಆ ಚಿತ್ರದಲ್ಲಿದ್ದ ಸೊಬಗು ಯಾರ ಕಣ್ಣಿಗೂ ಬೀಳಲೇ ಇಲ್ಲ.



ನಾನು ಇಂಜಿನಿಯರಿಂಗ್ ಓದುತಿದ್ದಿದ್ದು, ಇಡೀ ಊರಿಗಲ್ಲದಿದ್ದರೂ, ನಮ್ಮ ಮನೆಯ ಆಪ್ತವಲಯಕ್ಕೊಂದು ಹೆಮ್ಮೆ ತರುವ ವಿಷಯವಾಗಿತ್ತು. ಎಲ್ಲರ ಹತ್ತಿರಾನೂ "ನಮ್ಮ ಹುಡುಗ ಇಂಜಿನೀರಿಂಗ್ ಓದ್ತಿದಾನೆ, ದೊಡ್ಡ ಊರಲ್ಲಿ.." ಅಂತ ಹೇಳ್ಕೊಂಡು ತಿರುಗುತಿದ್ದರು. ಎಲ್ಲರು ನನ್ನನ್ನು ನೋಡುವ ರೀತಿ ಬದಲಾಯಿಸದ್ದವು. ನಾನು ಕಷ್ಟಪಟ್ಟು ಮುಗಿಸಿದ ಸುಡೊಕೊ ನೋಡಿ ಗೆಳೆಯ "ನೀನು ಬಿಡು ಇಂಜಿನೀರಿಂಗ್ ಓದ್ತಿದಿಯಲ್ವಾ.. ನೀನೆಲ್ಲಾ ಆರಾಮಾಗಿ ಮುಗಿಸಬಹುದು" ಅಂತ ಕಡೆಗಾಣಿಸಿದ. ವಿಷಯಗಳು ದಿನದಿಂದಿನಕ್ಕೆ ಬದಲಾಗ್ತಿವೆ ಅಂತ ನನಗನ್ನಿಸ್ತಾ ಇತ್ತು.



ತುಂಬ ಆಸೆಯಿಂದ ನನ್ನ ಮೊದಲನೆಯ ಸಂಬಳದಲ್ಲಿ ಆ ಚಿತ್ರಕ್ಕೊಂದು ಬೆಳ್ಳಿಯ ಕಟ್ಟು ಹಾಕಿದ ಮೇಲೆಯಂತೂ ನನಗೆ, ಯಾಕಾದರೂ ಹಾಕಿದೆನೋ ಅಂತ ಅನ್ನಿಸಲಿಕ್ಕೆ ಶುರು ಆಯಿತು. ಅವ್ರ ಮನೆಯಲ್ಲಿ ಬೆಳ್ಳಿಯ ಕಟ್ಟು ಹಾಕಿದ ಚಿತ್ರ ಇದೆಯಂತೆ ಅಂತ ಜನ ನನ್ನ ಮನೆಯವರಿಗೆಲ್ಲಾ ಒಂದು ಗುಲಗಂಜಿ ತೂಕದಷ್ಟು ಹೆಚ್ಚಿಗೆನೇ ಗೌರವ ಕೊಡಲಿಕ್ಕೆ ಶುರು ಮಾಡಿದರು. ಅಪ್ಪ ಮೊನ್ನೆ ಯಾರಹತ್ರಾನೋ ಕೈಗಡ ಕೇಳಲಿಕ್ಕೆ ಹೋದಾಗ " ನಿಮಗೇನು ಕಮ್ಮಿ, ಚಿತ್ರಕೆಲ್ಲ ಬೆಳ್ಳಿಯ ಕಟ್ಟು ಹಾಕಿಸ್ತೀರಾ.." ಅಂತ ನಾವೇನು ಬೆಳ್ಳಿಯ ಗಣಿ ಮಾಲಿಕರೇನೋ ಅನ್ನುವಂತೆ ನೋಡಿದ, ದುಡ್ಡು ಕೊಡುವ ಮೊದಲು. ಮೊನ್ನೆ ಯಾರೋ ಆ ಚಿತ್ರದ ಬಗ್ಗೆ, "ನೋಡಿ ಸರ್, ಬೆಳ್ಳಿಯ ಕಟ್ಟು ಹಾಕಿಸಿದಾರೆ, ಅದರ ಹಿರಿಮೆಗೆ ತಕ್ಕಂತೆ ಇರ್ಲಿ ಅಂತ ಹೇಳಿ ಹಿಂದಗಡೆ ಎಲ್ಲ ಗುಡ್ಡ, ಮರ, ಹಕ್ಕಿ ಎಲ್ಲಾ ಯಾರೋ ಕಲಾವಿದನ ಕೈಯಲ್ಲಿ ಬಿಡಿಸಿಸಿದಾರೆ. ಇದಕ್ಕಿಂತ ಮೊದ್ಲೆನೇ ಚೆನ್ನಾಗಿ ಕಾಣುತಿತ್ತು" ಅಂತ ಆಡ್ಕೋತಿದ್ದ. ನಾನು ಬಿಡಿಸಿದ ದಿನದಿಂದಲೇ ಅದು ಹಾಗೇ ಇತ್ತು ಅಂತ ಅವನಿಗೆ ವಿವರಿಸುವುದು ಹೇಗೆ? ಕೇಳಲಿಕ್ಕೆ ಅವನಿಗೆ ಪುರುಸೊತ್ತಾದರೂ ಎಲ್ಲಿ?



ನನಗೆ ಕೆಲ್ಸ ಸಿಕ್ಕಮೇಲೆ ನಾನು ಇಡ್ತಿದ್ದ ಪ್ರತಿಯೊಂದು ಹೆಜ್ಜೆಗೂ ನನ್ನ ಕೆಲಸಕ್ಕೂ ಸಂಬಂಧ ಕಲ್ಪಿಸುತಿದ್ದರು. ನಾನು ಬಂಧುಗಳಿಗೆ ತಿಂಗಳಿಗೆರಡು ಬಾರಿ ಫೋನು ಮಾಡದಿದ್ದರೆ "ಇವನಿಗೆ ಕೆಲ್ಸ ಸಿಕ್ಕಿದೆ ಅಂತ ಪೊಗರು.." ಅಂತೆಲ್ಲಾ ಅನ್ನಿಸಿಕೊಳ್ಳಬೇಕಾಗ್ತಿತ್ತು. ಮೂರು ವರ್ಷದ ಹಿಂದೆ ತೆಗೆದುಕೊಂಡ ಅಂಗಿಯನ್ನ ನೀಟಾಗಿ ಇಸ್ತ್ರಿ ಮಾಡಿ ಹಾಕಿಕೊಂಡ್ರೆ "ಓ, ಹೊಸಾದಾ, ನಿನಗೇನು ಕಮ್ಮಿ ತಿಂಗಳಿಗೆರಡು ಜತೆ ಬಟ್ಟೆ ತೊಗೊತಿಯ.." ಅನ್ನೋ ಶೈಲಿಯಲ್ಲಿ ಮಾತುಗಳು.



ನನಗೆ ಈಗಲೂ ಅರ್ಥ ಆಗೊಲ್ಲ. ಒಂದು ಚಿತ್ರ ಚೆನ್ನಾಗಿದೆ ಅನ್ನಲು ಏನು ಕಾರಣ? ಆ ಚಿತ್ರದ ಚೌಕಟ್ಟಾ? ಚಿತ್ರ ಬಿಡಿಸಿದ ಹಾಳೆಯ ದಪ್ಪಾನಾ? ಅಥವಾ ನಿಜವಾಗಿಯೂ ಆ ಚಿತ್ರದಲ್ಲ್ಲಿರುವ ನೈಜತೆ ಮತ್ತು ಪ್ರತಿ ಸೂಕ್ಷ ವಸ್ತುಗಳನ್ನೂ ಕಡೆಗಾಣಿಸದೆ ವಿವರಿಸುವ ಕಲೆನಾ? ಅದನ್ನು ಬಿಡಿಸಿದ ದಿನದಿಂದ ಇಂದಿನವರೆಗೂ ಅದನ್ನು ಉತ್ತಮಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಸರಿಕಾಣದನ್ನೆಲ್ಲಾ ಮೆಲ್ಲಗೆ ಅಳಿಸಿದ್ದೇನೆ, ಇದಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತೆ ಅನ್ನುವುದನ್ನೆಲ್ಲಾ ಅಳವಡಿಸಿದ್ದೇನೆ. ಅದು ಯಾರೂ ಗಮನಿಸುವುದೇ ಇಲ್ಲ. ಚಿತ್ರ ಹಾಳಾಗದಿರಲೆಂದು ಹಾಕಿದ ಚೌಕಟ್ಟಿನ ಅವಾಂತರವೇ ಜಾಸ್ತಿ.



ಕೆಲವೊಮ್ಮೆ ಅದನ್ನು ತಿರುಗಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಲಾ ಅನ್ನಿಸುತ್ತೆ, ಆದರೆ ಕೆಟ್ಟುಹೋದರೆ ಅನ್ನೋ ಭಯ.

Friday, June 15, 2007

ಅವನು...

ಸುಮಾರು ೬ ಘಂಟೆ ಆಗ್ತಾ ಬಂದಿತ್ತು. ಸಾಯಂಕಾಲ. ಎಲ್ಲರ ಕಣ್ಣುಗಳು ಮೆಲ್ಲಗೆ ಕತ್ತಲೆಗೆ ಹೊಂದಿಕೊಳ್ತಿದ್ವು. ಆವತ್ತು ಯಾವುದೇ ಹಬ್ಬ-ಹರಿದಿನವಲ್ಲದ ಕಾರಣ ಮನೆಯಲ್ಲೇನೂ ಅಂತಹ ಸಡಗರ ಸಂಭ್ರಮ ಎನೂ ಇರಲಿಲ್ಲ. ಸಾಮಾನ್ಯವಾಗಿ ಜನರು ತಮ್ಮ ಪ್ರತಿಶತ ೮೦ ರಷ್ಟು ಜೀವನವನ್ನು ಹೀಗೆಯೆ ಎನೂ ವಿಶೇಷಗಳಿಲ್ಲದೆ ಕಳೆಯುವಂತಹ ದಿನ. ನಿತ್ಯ ದಿನಚರಿಯಂತೆ ಅವ್ವ, ಅಮ್ಮ ತರಕಾರಿ ಹೆಚ್ಚುತ್ತಾ, ಕಕ್ಕಿಯಂದಿರು ಅಡುಗೆ ಮನೆಯನ್ನು ವಿಚಾರಿಸ್ಕೊತಾ, ಅಪ್ಪ, ಕಕ್ಕಂದಿರು ಹೊರಗಡೆ ಕುತ್ಕೊಂಡು ಮಾತಾಡ್ತಾ, ನಾನು ಅಲ್ಲೆ ಅವರ ಪಕ್ಕದಲ್ಲಿ ಕುತ್ಕೊಂಡು ಹಳೆ ಬಾಲಮಂಗಳದ 'ಡಿಂಗ' ಓದ್ತಾ, ಹೀಗೆ ಪ್ರತಿಯೊಬ್ಬರೂ ಅವರ ಅಭಿರುಚಿಗೆ ತಕ್ಕಂತೆ ಕಾಲ ತಳ್ತಾ ಇದ್ವಿ.


ಹೀಗೆ ಒಂದು ಅರ್ಧ ಘಂಟೆ ಕಳಿತೊ ಇಲ್ವೊ ನನ್ನ ತಂಗಿ ಕಿಟಾರ್ ಅಂತ ಕಿರಿಚ್ಕೊಂಡಿದ್ದು ಕೇಳಿಸ್ತು. ಕಕ್ಕ "ಹೂಂ.. ಅವ್ನು ಬಂದ ಅಂತ ಅನ್ಸತದ. ಇವತ್ತು ಆಗಿದ್ದಾಗಲಿ ಒಂದು ಕೈ ನೋಡ್ಕೊಳ್ಲೇಬೇಕು" ಅಂದ್ರು. ಅವರಿಗೆ ಸಮ್ಮತಿಸುವಂತೆ ಅಪ್ಪಾನೂ " ಹೌದು, ಇವಂದು ಅತಿಯಾಯ್ತು.." ಅಂದ್ರು. "ಬಾಲಮಂಗಳ" ಓದ್ತಾ ಇದ್ದ ನನಗೆ, ಇವತ್ತು ಏನಾದ್ರೂ ಆಗೇ ಆಗುತ್ತೆ ಅನ್ನುವ ಕುತೂಹಲ, ಎನಾದ್ರೂ ಆದ್ರೆ ಎಂಬ ಭಯ, ನಾನೂ ಎನಾದ್ರು ಮಾಡ್ಬೇಕು ಅನ್ನೋ ಧೈರ್ಯ, ಎಲ್ಲಾ ಒಟ್ಟಿಗೆ ಸೇರಿ ನನ್ನ ಎನೂ ಮಾಡದ್ಹಂಗೆ ಮಾಡಿತು. ಕುತೂಹಲದ ಪಾಲು ಒಂದು ತೂಕ ಹೆಚ್ಚಾದಾಗ ತಡಿಲಾರ್ದೆ ನಾನೂ ಅವರ ಹಿಂದೆ ಒಳಗಡೆ ಓಡಿ ಹೋದೆ.



ಬೇಸಿಗೆ ರಜೆಯಲ್ಲಿ ಅವ್ವನ ಮನೆಯಲ್ಲಿ ಒಂದು ತಿಂಗಳು ಇದ್ದು ಹೋಗ್ಲಿಕ್ಕೆ ಬಂದಿದ್ದ ನಾನು ಅವನನ್ನು ಎಂದೂ ನೋಡಿರಲಿಲ್ಲ. ಅವನು ಮಾಡ್ತಿದ್ದ ಕಿತಾಪತಿ, ಕೊಡ್ತಿದ್ದ ಕಿರುಕುಳಗಳ ಬಗ್ಗೆ ಎಲ್ಲ ಎಲ್ಲರ ಬಾಯಲ್ಲೂ ಬೃಹುತ್ ವರ್ಣನೆ ಸಮೇತ ಕೇಳಿದ್ದೆ ಅಷ್ಟೆ. ನಮ್ಮ ಓಣಿಯ ತುಂಬೆಲ್ಲಾ ಅವನ, ಇವನ ಅಣ್ಣ-ತಮ್ಮಂದಿರ ಬಗ್ಗೇನೆ ಮಾತು. ಅವರ ಜಾಯಮಾನವೆ ಅಂತದ್ದು, ಕಂಡ ಕಂಡವರ ಮನೆಗೆ ನುಗ್ಗೋದು, ಕೈಗೆ ಸಿಕ್ಕಿದ್ದೆಲ್ಲಾ ಕಿತ್ಕೋಳ್ಳೋದು, ನಾಲ್ಕಾಣೆಯಷ್ಟು ಸಾಮಾನು ಕದ್ದರೆ ರುಪಾಯಿಯಷ್ಟು ಸಾಮಾನು ಚೆಲ್ಲಾಪಿಲ್ಲಿ ಮಾಡೊದು, ಮನೆಯ ಹೆಂಗಸು ಮಕ್ಕಳನ್ನೆಲ್ಲಾ ಹೆದರಿಸೋದು, ಹೀಗೆ ಒಂದೇ ಎರಡೇ..? ಎಷ್ಟು ಹೇಳಿದರೂ ಮುಗಿಯದ ಅನಂತ ಕಥೆ. ಹೀಗೆ ಯಾರಿಗೂ ಹೆದರದೆ, ಒಬ್ಬರನ್ನೂ ತಮ್ಮ ಮೈ ಸೋಕಲ್ಗೋಡದೆ ರಾಜಾರೋಷವಾಗಿ ಬಾಳುತ್ತಿದ್ದ ಅವನ ಮತ್ತು ಅವನ ಸಂಸಾರ ನೋಡಿ ನನಗೆ ಪ್ರತಿಬಾರಿ ಕೋಪ, ಅಸಹ್ಯ ಉಂಟಾಗ್ತಿದ್ರೂ ಕೆಲವೊಮ್ಮೆ ಅವರ ಧೈರ್ಯ ನೋಡಿ ಒಳಒಳಗೆ ಖುಶಿಯೂ ಆಗ್ತಿತ್ತು.



ಹೀಗೆಲ್ಲಾ ಯೋಚಿಸ್ತಾ ನಾನು ಒಳಗೆ ಹೋಗೋವಷ್ಟರಲ್ಲಿ ಅಪ್ಪ, ಕಕ್ಕಂದಿರೆಲ್ಲ ಕೈಯಲ್ಲಿ ಕೋಲ್ಹಿಡಿದು, ಲುಂಗಿ ಮೇಲಕ್ಕೆ ಕಟ್ಟಿ ಅಡುಗೆ ಮನೆ ಕಡೆಗೆ ನುಗ್ಗಿದ್ದು ಕಾಣಿಸ್ತು. ಅವರ ಮುಖದಲ್ಲಿದ್ದ ರೋಷ, ಅಸಮಧಾನದಿಂದಲೇ ಮುಂದೆ ಆಗಬಹುದಾದನ್ನೆಲ್ಲಾ ಮನಸ್ಸು ಊಹೆ ಮಾಡ್ತಿತ್ತು. ಒಳಗೆ ಹೋಗಿ ಒಂದುವರೆ ನಿಮಿಷದ ತನಕ ಸಂಪೂರ್ಣ ನಿಶಬ್ಧ. ಮುಂದಿನ ಕ್ಷಣದಲ್ಲೇ ಅಡುಗೆ ಮನೆಯ ಒಂದೊಂದೆ ಪಾತ್ರೆಗಳು ನೆಲ ಕಂಡು ಧಡ ಭಢ ಶಬ್ದ ಮಾಡಲು ಶುರು ಮಾಡಿದ್ವು. ಆ ಪಾತ್ರೆಗಳ ಸದ್ದು, ಒಳಗಿರುವವರ ಕೂಗಾಟ ಇವುಗಳ ಮಧ್ಯ ನನಗೆ ಅವನ ನೋವಿನ ಕೀರಲು ದನಿ ಕೂಡ ಕೇಳ್ಲಿಲ್ಲ. ಸತ್ತೇ ಹೋದ್ನ ಅಂತ ಅನಿಸ್ಬಿಡ್ತು. ಯಾಕೋ ಇಷ್ಟು ದಿನ ಇಲ್ಲದ್ದು ಇವತ್ತು ನನಗೆ ಅವನ ಮೇಲೆ ಮುರುಕ ಉಂಟಾಗೊಕ್ಕೆ ಶುರು ಆಯ್ತು. ಅಷ್ಟ್ರಲ್ಲಿ ಮುಖದಲ್ಲಿ ವಿಜಯದ ನಗೆ ಹೋತ್ತ ನನ್ನ ಕಕ್ಕ ಕಿಂಚಿತ್ತು ದಯಾ ಕರುಣೆ ಇಲ್ದೇನೆ ಅವ್ನನ್ನ ಎತ್ಕೊಂಡೇ ಹೊರಗಡೆ ಬಂದ. ಎಲ್ಲರ ಮುಂದೆನೇ ಅತ್ಯಂತ ದಾರುಣ ಸ್ಥಿತಿಯಲ್ಲಿದ್ದ ಅವನನ್ನು ’ಸತ್ಹೋಗು..’ ಅಂತ ಶಪಿಸಿ ಹಿತ್ತಲ ಕಡೆ ಬಿಸಾಕಿದ. ಆಮೇಲೆ ಅವ್ನಿಗೆ ಎನಾಯ್ತು, ಎಲ್ಲಿಗೆ ಹೋದ ಅಂತ ಯಾರಿಗೂ ಗೊತ್ತಿಲ್ಲ ಮತ್ತು ಯಾರೂ ತಲೆ ಕೆಡಿಸ್ಕೊಳ್ಲೂ ಇಲ್ಲ. ನನ್ನೊಬ್ಬನನ್ನು ಬಿಟ್ಟು ಎಲ್ಲರ ಮುಖದಲ್ಲೂ ಎನೋ ನಿಶ್ಚಿಂತೆಯ ಕಳೆ. ನನಗೆ ಮಾತ್ರ ಅಯ್ಯೊ ಪಾಪ ಅನ್ಸ್ತಿತ್ತು.

ಯಾಕೆ ಹಿಂಗೆ...?

ಇವತ್ತಿಗೂ ನನಗೆ ಆ ಅಂಗೈಯಗಲದ ಚೂಪು ಮೂಗಿನ ಇಲಿಯ, ಸಾಯೋ ಸ್ಥಿತಿಯಲ್ಲೂ ಎನೋ ಆಶಾಭಾವನೆ ಇಟ್ಕೊಂಡಿರುವಂತೆ ಮಿಣಿಮಿಣಿ ಹೊಳೆಯುವ ಆ ಸಣ್ಣ ಕಣ್ಣುಗಳು ನೆನಪಾಗ್ತವೆ.

ಯಾಕೆ ಹಿಂಗೆ...?