Monday, July 23, 2007

ತಿರುವು...

ಬೆಳಬೆಳಗ್ಗೆ ೮ ಘಂಟೆಗೆನೇ ಎದ್ದು ರೂಮ್ ಹೊರಗಡೆ ಬಂದೆ. ನಾನೇ ಸೋಮಾರಿ ಎಂದ್ರೆ ಸೂರ್ಯ ನನಗಿಂತ ಸೋಮಾರಿ. ಆ ಚುಮುಚುಮು ಚಳಿಗೆ ಎದ್ದೇಳಕ್ಕೆ ಆಗದೆ ಇನ್ನೂ ಮುಖ ಕೆಳಗೆ ಮಾಡಿಕೊಂಡು ಮಲಗಿದ್ದ. ನಾನು ಎದ್ದ ಮೇಲೆ ನನ್ನ ಗೆಳಯ ಪುತ್ತೂರ್ ( ಪುತ್ತೂರು ವೆಂಕಟೇಶ ) ಇನ್ನೂ ಮಲಗಿರೋದು ನನ್ನ ಕಣ್ಣುಗಳಿಂದ ನೋಡಲಿಕ್ಕೆ ಆಗ್ಲಿಲ್ಲ. ಕಷ್ಟಪಟ್ಟು ಅವನನ್ನು ಎಬ್ಬಿಸಿದೆ. ನನ್ನನ್ನು ಬಾಯಿತುಂಬ ಬೈದುಕೊಳ್ಳುತ್ತಲೇ ಎದ್ದ. ಇಬ್ರಿಗೂ ಹಾಸ್ಟೆಲ್ ಭಟ್ಟರ ಟೀ ಕುಡಿಲಿಕ್ಕೆ ಮನಸಾಗ್ಲಿಲ್ಲ, ಹತ್ತಿರದ ಪಿ.ಡಿ(ಫಲಹಾರ ದರ್ಶಿನಿ) ಕಡೆ ಹೆಜ್ಜೆ ಹಾಕಿದೆವು. ಆ ಚಳಿಯಲ್ಲಿ ಕೈಗಳನ್ನ ಜೇಬಿನೊಳಗೆ ಇಳೆಬಿಟ್ಟುಕೊಂಡು ಹೊಗೋದೊ ಬೇಡವೊ ಅನ್ನೊ ಹಾಗೆ ಮೆಲ್ಲಗೆ ಕಾಲು ಎಳಿತಿದ್ವಿ.

ಅಲ್ಲಿಯ ವೇಟರ್ ಬಂದು ನಮ್ಮ ತಿಂಡಿ ಮತ್ತು ಎರಡು ಟೀಯ ಆರ್ಡರನ್ನ ಗೀಚಿಕೊಂಡು ಹೋದ. ಮುಂದೇನು ಮಾಡುವುದು ಅಂತ ಗೊತ್ತಾಗದಿದ್ದಾಗ ಅಕ್ಕಪಕ್ಕದ ಟೇಬಲ್ ಗಳ ಮೇಲೆ ಕಣ್ಣು ಹಾಯಿಸಿದೆ. ಯಾವ ಮುಖದಲ್ಲೂ ಒಂದು ಕಳೆ ಅಂತ ಇರಲಿಲ್ಲ. ಎದ್ದಿದೇವೆ ಅನ್ನೋ ಒಂದೇ ಕಾರಣಕ್ಕೆ ಅಲ್ಲಿ ಬಂದು ಕುಳಿತುಕೊಂಡಿದ್ರು. ಆ ಹೊತ್ತಿಗೆ ಸುಮಾರು ೩೫ ರ ಆಸುಪಾಸಿನ ಓರ್ವ ವ್ಯಕ್ತಿ ಮತ್ತು ಒಬ್ಬ ಹುಡುಗ ಬಂದು ನಮ್ಮ ಪಕ್ಕದ ಟೇಬಲಲ್ಲಿ ಕುಳಿತರು. ಅವರು ತಂದೆ ಮಕ್ಕಳೆಂದು ಮುಂದೆ ಅವರ ಮಾತು ಕದ್ದಾಲಿಸಿದ ಮೇಲೆ ತಿಳಿತು. ಅಪ್ಪ ಮಗನಿಗೆ ತನ್ನ ಮೊಬೈಲಲ್ಲಿ ಬಂದ ಒಂದು ಮೆಸ್ಸೇಜ್ ಅನ್ನು ಹಿಂಗೆ ಓದಿ ಹೇಳ್ತಿದ್ದ,

"There were 5 frogs sitting on a log. Suddenly one frog decided to jump into ater.

so now how many frogs are there on the log?

A: Five only, because there is a great difference between deciding and doing..!"

ಅದನ್ನ ಓದಿದ ಮೇಲೆ ಅದರ ಆರ್ಥ ಅವನಿಗೆ ವಿವರಿಸುತ್ತಾ, "ನೋಡು ಮಗು, ನೀನು ಸುಮ್ನೆ 1st rank ಬರಬೇಕು ಅಂತ ಅಂದುಕೊಂಡರೆ ಆಗೊಲ್ಲ, ಅದಕ್ಕೆ ತಕ್ಕ ಪರಿಶ್ರಮನೂ ಪಡಬೇಕು, ದಿನವೂ ನೀನು......." ಹೀಗೆ ಅವನನ್ನ ಹುರಿದುಂಬಿಸುತಿದ್ದ, ಪರೀಕ್ಷೆಗಳು ಹತ್ತಿರದಲ್ಲಿದ್ವು ಅಂತ ಕಾಣಿಸುತ್ತೆ.

ಜೀವನದಲ್ಲಿ ಕೆಲವೊಂದು ಅತ್ಯಂತ ಸಣ್ಣ ಸಣ್ಣ ಘಟನೆಗಳು ದೊಡ್ಡ ತಿರುವಿಗೆ ಕಾರಣಗಳಾಗುತ್ತವೆ ಅಂತ ಕೇಳಿದ್ದೆ ಆದ್ರೆ ಎಂದೂ ಅನುಭವಿಸಿರಲಿಲ್ಲ. ಆ ತಂದೆ ಮಕ್ಕಳ ಸಂಭಾಷಣೆ ನನ್ನಲ್ಲಿ ಏನೋ ಬದಲಾವಣೆ ತರುತ್ತೆ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಆ ದಿನ ಪೂರ್ತಿ ಅವೇ ಮಾತುಗಳು ಪದೇ ಪದೇ ನೆನಪಾಗುತಿದ್ದವು. ರಾತ್ರಿ ಮಲಗುವಾಗ ನನ್ನ ಬಹು ವರ್ಷದ ಕನಸಾದ, ವೇಗದ ಓಟಗಾರನಾಗಬೇಕೆಂಬ ಆಸೆಯನ್ನ ನನಸು ಮಾಡಲೇ ಬೇಕಂತ ಅನ್ಕೊಂಡೆ.

ಮರುದಿವಸ ಬೆಳಗ್ಗೆ ೫ ಘಂಟೆಗೆ(!) ಎದ್ದವನೇ ಓಡಲಿಕ್ಕೆ ಹೊರಟೆ. JLB ರೋಡ್ ಅಲ್ಲಿ ೨ ಕಿ.ಮೀ. ಓಡೊವಷ್ಟರಲ್ಲಿ ನನ್ನ ಹೆಣ ಬೀಳುವ ಹಾಗಾಗಿತ್ತು. ಇಷ್ಟು ಜಲ್ದಿ ಸಾಯೊದು ಬೇಡ ಅಂತ ವಾಪಾಸು ನಡಕೊಂಡು ಬಂದೆ. ಅವತ್ತು ದಿನ ಪೂರ್ತಿ ಕಾಲು ನೋವು. ಮರುದಿವ್ಸ ಮತ್ತೆ ಹೋದೆ, ಪರ್ವಾಗಿಲ್ಲ ಓಡಬಹುದು ಅನ್ನಿಸ್ತು. ದಿನ ಕಳೆದ್ಹಂಗೆ ಓಡುವ ದೂರ ಜಾಸ್ತಿ ಮಾಡಿದೆ, ಬೇರೆ ಬೇರೆ ಕಡೆ ಹೋಗ್ಲಿಕ್ಕೆ ಶುರು ಮಾಡ್ದೆ. ಒಂದು ದಿವ್ಸ ಅರಮನೆ ಕಡೆ ಹೋದರೆ, ಇನ್ನೊಂದು ದಿವ್ಸ ಊಟಿ ರೋಡ್ ಗೆ. ಮಳೆ ಬರಲಿ, ಚಳಿಯಾಗಲಿ, ಏನೇ ಆಗ್ಲಿ ಒಂದು ದಿವಸ ಕೂಡ ಓಡುವುದನ್ನ ತಪ್ಪಿಸಲಿಲ್ಲ. ಹೀಗೇ ೩ ತಿಂಗಳು ಕಳೆದ್ಮೇಲೆ, ಮೊದಲನೇ ಸರ್ತಿ ಓಡುತ್ತಾ ಚಾಮುಂಡಿ ಬೆಟ್ಟ ಹತ್ತಿದೆ. ಆಹಾ, ಬೆಟ್ಟದ ತುದಿ ಮುಟ್ಟಿದಾಗ ಆಗುವ ಆನಂದ ವಿವರಿಸಲಿಕ್ಕೆ ಆಗೊಲ್ಲ. ಮುಂದೆ ಅದು ನನ್ನ ದಿನಚರಿಯ ಒಂದು ಅಂಗ ಆಗಿಹೊಯಿತು. ಹಾಸ್ಟೆಲ್ ನಿಂದ ಬೆಟ್ಟದ ಬುಡದವರೆಗೆ ೩ ಕಿ.ಮೀ. ಓಡುವುದು, ಅರ್ಧ ಘಂಟೆಯಲ್ಲಿ ಬೆಟ್ಟದ ಮೆಟ್ಟಲುಗಳನ್ನ ಹತ್ತುವುದು, ಅಲ್ಲಿ ಅರ್ಧ ತಾಸು ಕಳೆದಮೇಲೆ ತಿರುಗಿ ವಾಪಾಸು ಓಡಿಕೊಂಡು ಬರುವುದು. ಹೀಗೆ ಒಂದು ವರ್ಷದವರೆಗೂ ಬೇಜಾರಿಲ್ಲದೆ ನಡೆಸ್ಕೊಂಡು ಬಂದೆ.

ನಾನು ಪಟ್ಟ ಪರಿಶ್ರಮಕ್ಕೆ ಒಂದು ಮೊದಲ ಚಿಕ್ಕ ಪ್ರತಿಫಲ ದೊರೆತದ್ದು ನಾನು ನಮ್ಮ ಯೂನಿವರ್ಸಿಟಿಯ sports meet ಅಲ್ಲಿ ನನ್ನ ಕಾಲೇಜ್ ಅನ್ನು ಪ್ರತಿನಿಧಿಸಿದಾಗ. ೩೦೦೦ ಮೀ ಓಟದಲ್ಲಿ ನನಗೆ ಬಂಗಾರದ ಪದಕ ಸಿಕ್ಕಾಗ. ಸುತ್ತ ನಿಂತಿದ್ದ ಇಷ್ಟು ಜನ ಜೋರಾಗಿ ಚಪ್ಪಾಳೆ ತಟ್ಟಿದಾಗ. ಅಲ್ಲಿಗೆ ಬಂದಿದ್ದ ಕೆಲವು coach ಗಳು ನಂಗೆ ಸ್ಟೇಟ್ ಲೆವೆಲ್ ಅಲ್ಲಿ ಭಾಗವಹಿಸು, ಬಂಗಾರದ ಪದಕ ಖಂಡಿತ ಅಂತ ಬೆನ್ನುತಟ್ಟಿದಾಗ.

ಮುಖದಲ್ಲೊಂದು ಸಣ್ಣ ತೃಪ್ತಿಯ ನಗೆ ಬಂತು.

"ಏನ್ಲೇ ಕಿಸಿತಾ ಇದಿಯಾ..? ನಂದು ತಿಂಡಿ ಮುಗಿದು ಐದು ನಿಮಿಷ ಆದ್ರೂ ನಿಂದಿನ್ನೂ ಮುಗಿತಾನೇ ಇಲ್ಲ. ಜಲ್ದಿ ಜಲ್ದಿ ಮುಗಿಸು. ಮೊದ್ಲೇ ಚಳಿ. ಬ್ಯಾಡ ಅಂದ್ರೂ ಬೆಳಬೆಳಗ್ಗೆನೇ ಎಳಕೊಂಡು ಬಂದಿದಿಯ. ನೆಮ್ಮದಿಯಿಂದ ಮಲಗ್ಲಿಕ್ಕೂ ಬಿಡಲ್ಲ." ಅಂತ ಪುತ್ತೂರ್ ಕರೆದಾಗ್ಲೇ reverse gear ಹಾಕಿ ವಾಪಾಸ್ ಬಂದಿದ್ದು. ಆ ತಂದೆ ಮಗ ಆಗ್ಲೆ ಪಕ್ಕದ ಟೇಬಲ್ ಇಂದ ಎದ್ದು ಹೋಗಿದ್ರು. ಬಿಲ್ಲು ಕೊಟ್ಟು, ೪ ಚಾಕೊಲೇಟ್ ತೆಗೊಂಡು ವಾಪಾಸ್ ಬಂದ್ವಿ, ಜೇಬಲ್ಲಿ ಕೈ ಇಟ್ಕೊಂಡು.

5 comments:

Sushrutha Dodderi said...

ಹ್ಮ್.. ಚನಾಗ್ ಬರ್ದಿದೀರ...

Ranju said...

ನೀವು ಕನಸಲ್ಲಿ ಮೈಸೂರ್ ಸುತ್ತಿದ್ದಲ್ಲದೆ ನಮಗೂ ಸುತ್ತಿಸಿದ್ದಿರಲ್ಲ.
ಸಕತ್ ಆಗಿ ಬರೆದಿದ್ದಿರಾ.
ಮೊದಲ ಬಾರಿಗೆ ನಿಮ್ಮ ಬ್ಲಾಗ್ ಲೋಕಕ್ಕೆ ಬಂದೆ. ಬಂದಿದ್ದಕ್ಕೆ ಖುಶಿ ಆಯಿತು.

ಅನಂತ said...

@ಸುಶ್ರುತ,
ಧನ್ಯವಾದಗಳು.. ;)

@ರಂಜು,
:)
ನಿಮಗೆ ಖುಶಿಯಾಗಿದ್ದು ನೋಡಿ ನಮಗೂ ಖುಶಿಯಾಯ್ತು.
ಧನ್ಯವಾದಗಳು...

Anonymous said...

tumbaa chandada blogu...
keep it up..

ಅನಂತ said...

@archana

thank u...!! ;o)