Monday, August 11, 2008

ಸೋಡಾ ಬಾಟಲ್ ಸ್ಪಿರಿಟ್



ನನ್ನ ತಂದೆ ಆವಾಗಾವಾಗ 'ನಮ್ಮದೆಲ್ಲಾ ಬರೇ ಸೋಡಾ ಬಾಟಲ್ ಸ್ಪಿರಿಟ್ ಇದ್ಹಂಗೆ' ಅಂತ ಹೇಳಿ ನಗ್ತಿರ್ತಾರೆ. ಈ ಮಾತು ಬೇರೆಯವರ ಬದುಕಿಗೆ ಒಪ್ಪುತ್ತೋ ಇಲ್ವೋ ಗೋತ್ತಿಲ್ಲ ಆದ್ರೆ ಇವು ೧೦೦% ನನಗೋಸ್ಲರ ಸ್ಪೆಷಲ್ ಆರ್ಡರ್ ಕೊಟ್ಟು ಮಾಡಿಸಿದಂತಹ ಶಬ್ದಗಳು ಅಂತ ಅನ್ಸುತ್ತೆ.

ನೀವು ಇತ್ತೀಚಿನ ದಿನಗಳಲ್ಲಿ ಅಲ್ಲದಿದ್ದರೂ ಚಿಕ್ಕವರಾಗಿದ್ದಾಗಲಾದ್ರೂ ಬಂಡಿಯವನು ಹಸಿರು ಸೋಡಾ ಬಾಟಲ್ ಅನ್ನು ಭುಜಕ್ಕೆ ಆನಿಸಿಕೊಂಡು ಬಲವಾಗಿ ಗೋಲಿಗುಂಡನ್ನು ಹಿಂದಕ್ಕೆ ತಳ್ಳಿ, ಬಂದೂಕಿನಿಂದ ಗುಂಡು ಹೊರಟಂತ ಶಬ್ದ ಬಂದಾಗ ನೀವು ಒಂದು ಕ್ಷಣ ನಡುಗಿ, ಅದರ ಬಾಯಿಂದ ಬರುತ್ತಿದ್ದ ಹೊಗೆಯನ್ನು ಮುಗ್ಧವಾಗಿ ನೋಡಿ, ಕುಡಿಯೋದಿಕ್ಕೆ ಬಾಟಲಿಯೆತ್ತಿದಾಗ ಅದರಿಂದ ಏನೂ ಬರದೆ, ಬೇರೆಯವರು ಕುಡಿಯೋದನ್ನ ಪಿಳಿಪಿಳಿ ಅಂತ ಕಣ್ಣು ಬಿಟ್ಕೊಂಡು ನೋಡಿ, ಕೊನೆಗೆ ಬಾಟಲ್ಲನ್ನು ಹೇಗೋ ತಿರುಗಿಸಿ, ಕುಡಿದು ಡರ್ರ್‌ರ್ರ್ ಎಂದು ಡೇಗು ಬಿಟ್ಟಿರ್ತೀರ.

ಸೋಡ ಬಾಟಲ್ ಓಪನ್ ಮಾಡಿದ ತಕ್ಷಣ ಆಯ್ತು ಇನ್ನು ನನ್ನ ಹಿಡಿಯುವವರೇ ಇಲ್ಲ ಅನ್ನುವಹಾಗೆ ಅರ್ಭಟ ಮಾಡುತ್ತಾ ಒಳಗಿರುವ ಗ್ಯಾಸು ಹೊರನುಗ್ಗುತ್ತೆ. ಆದರೆ ಇದರ ಅರ್ಭಟ ಪೌರುಷ ಎಲ್ಲಾ ಕೇವಲ ಕೆಲವು ಸೆಕಂಡುಗಳ ಕಾಲ ಅಷ್ಟೆ. ಆಮೆಲೇ ಅದಕ್ಕೂ ನೀರಿಗೂ ಯಾವುದೇ ವ್ಯತ್ಯಾಸವಿಲ್ಲ.

ಹಗಲುಗನಸು ಕಾಣುವುದರಲ್ಲಂತೂ ನಾನು ನಿಸ್ಸೀಮ. ಬೆಳಿಗ್ಗೆ ಎದ್ದು ಜಾಗಿಂಗ್ ಹೋಗುವುದು, ವ್ಯಾಯಾಮ ಮಾಡುವುದು, ನನಗಿಷ್ಟವಾದ ವಿಷಯವನ್ನ ಬುಡದವರೆಗೆ ಅರೆದು ಕುಡಿಯುವುದು, ಯಾವದೋ ರಮ್ಯ ಸ್ಥಳದಲ್ಲಿ ಒಬ್ಬನೇ ತಿರುಗಾಡೋದು, ಹಿಮಾಲಯದಲ್ಲೊಂದು ಮನೆ ಮಾಡೋದು, ಇನ್ನೊಬ್ಬರಿಗಾಗಿ ದೊಡ್ಡ ತ್ಯಾಗ ಮಾಡೋದು, ದೇಶಕ್ಕೆ ವಿಪತ್ತು ಬಂದಾಗ ನಾನೋಬ್ಬನೆ ಪ್ರಾಣ ಹೋಗೋ ತನಕ ಹೋರಾಡಿ ಕಾಪಾಡೋದು, ಹೀಗೆ ಒಂದಕ್ಕೊಂದು ಸಂಬಂಧವಿಲ್ಲದ, ಕೆಲವೊಂದಕ್ಕೆ ಅರ್ಥ ಕೂಡ ಇಲ್ಲದ ಕನಸುಗಳನ್ನ ಕಾಣ್ತಿರ್ತೀನಿ. ಕೆಲವೊಂದಂತೂ ನಿಜವಾಗಿಯೂ ನನಗೆ ನಿಜ ಜೀವನದಲ್ಲಿ ಮಾಡಬೇಕೆಂಬ ಆಸಕ್ತಿ ಕೂಡ ಇಲ್ಲ, ಆದರೆ ಹೇಗಿದ್ರೂ ಕನಸಲ್ವಾ, ಪುಕ್ಕಟೆಯಾಗಿ ಸಿಗ್ತಿದೆ ಅಂತ ಇದ್ದುಬದ್ದದ್ದೆಲ್ಲಾ ಕಾಣೋದು.

ನಾನು ಕಾಣುವ ಎಲ್ಲಾ ಕನಸುಗಳು ನನಸಾಗಿಲ್ಲ. ಅದಕ್ಕಿರುವ ಏಕೈಕ ಕಾರಣ ನನ್ನ ಸೋಮಾರಿತನ. ಹಾಗಂತ ನಾನು ಕಾಣೋದೆಲ್ಲಾ ಹಗಲುಗನಸಾಗಿಯೇ ಉಳಿದಿಲ್ಲ. ಕೆಲವೊಂದು ಸಮಯದಲ್ಲಿ, ಅದು ಯಾವ ಕಾರಣಕ್ಕಾಗಿ ಅಂತ ಇದುವರೆಗೂ ನನಗೆ ತಿಳಿದಿಲ್ಲ, ಕೆಲವೊಂದು ಕನಸುಗಳನ್ನ ಕಾರ್ಯರೂಪಕ್ಕೆ ತರಲಿಕ್ಕೆ ಪ್ರಯತ್ನ ಪಟ್ಟಿದೀನಿ. ನೋಡಿದವರಿಗೆ ಅಬ್ಬ ಮುಗಿತು ಇನ್ನು ಇವನ ಸೋಮಾರಿತನ ಎನ್ನೋದು ತೊಳೆದು ಕೊಚ್ಚಿ ಹೋಯ್ತು, ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಲ್ಲ, ಇನ್ನು ಇವನನ್ನ ಹಿಡಿಯುವವರೆ ಇಲ್ಲ ಅಂತ ಭ್ರಮೆ ಪಡುವ ಮಟ್ಟಕ್ಕೆ. ಆದರೆ ಯಾವತ್ತೂ ಈ ನನ್ನ ಹುರುಪು ಕೆಲವು ದಿನಗಳಿಗಿಂತ ಜಾಸ್ತಿ ಉಳಿದಿಲ್ಲ. ಮತ್ತೆ ಅದೇ ರಾಗ ಅದೇ ತಾಳ.

ಹೀಗೆ ಯಾವಾಗಲಾದರೂ ನನ್ನ 'ದೃಢ' ನಿರ್ಧಾರಗಳನ್ನ ತಿಳಿಸಿದಾಗ ತಂದೆ ನಕ್ಕು ಹೇಳ್ತಿರ್ತಾರೆ, 'ನಮ್ದು ಸೋಡಾ ಬಾಟಲ್ ಸ್ಪಿರಿಟ್ ಇದ್ದ ಹಾಗೆ' ಅಂತ ಮತ್ತು ನಾನು ಯಾವತ್ತೂ ಅವರ ವಾಕ್ಯಗಳು ಸುಳ್ಳಾಗುವುದಕ್ಕೆ ಬಿಟ್ಟಿಲ್ಲ.

ಜೀವನದಲ್ಲಿ ಯಾವತ್ತಾದರೂ ಒಂದು ದಿನ ಇದನ್ನೆಲ್ಲಾ ದಾಟಿ ಮುಂದೆ ಹೋಗಬೇಕು, ಸೋಡಾ ಬಾಟಲ್‍ನಂತಾಗದೇ ಹರಿಯುವ ನದಿಯಂತಾಗಬೇಕು, ವಿಶಾಲ ಕಡಲಂತಾಗಬೇಕು, ನಿಶ್ಚಲ ಬೆಟ್ಟದಂತಾಗಬೇಕು, ಬೆಳಗುವ ಸೂರ್ಯನಂತಾಗಬೇಕು. ಹ್ಮ್, ಶುರುವಾಯ್ತು ನೋಡಿ ಇನ್ನೊಂದು ಹಗಲುಗನಸು, ಅಕಸ್ಮಾತ್ ಪ್ರಯತ್ನಪಟ್ಟರೂ ಇನ್ನೊಂದು, ಸೋಡಾ ಬಾಟಲ್.